ಶುಕ್ರವಾರ, ಅಕ್ಟೋಬರ್ 26, 2012


ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
(ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
ಇವತ್ತಿನ ಪ್ರಜಾವಾಣಿಬ್ಲಾಗಿಲನು ತೆರೆದು... ಅಂಕಣದಲ್ಲಿ  ಈ ಬ್ಲಾಗನ್ನು ಪರಿಚಯಿಸುವ ಅರ್ಥಪೂರ್ಣವಾದ ಲೇಖನ ಬಂದಿದೆ. ಆ ಬಗ್ಗೆ 
ಅಂಕಣಕಾರರಿಗೂ ಪತ್ರಿಕೆಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
  • "ಅದೆಲ್ಲ ಪ್ರಶ್ನೆ ಸಮಾಜಕ್ಕೆ ಸಂಬಂಧವಿಲ್ಲ. ತಲೆ ಇದ್ದರಲ್ಲವೆ ಅದರಲ್ಲಿ ಪ್ರಶ್ನೆಗಳೇಳುವುದು ? ದುಂಡು ಜಗತ್ತಿಗೆ ರುಂಡವಿಲ್ಲ, ಸ್ವಾಮೀ!"
  • ನೀತಿಯನ್ನು ಬಿಟ್ಟು ಬಾಳುವ ಪ್ರಜೆಗಳೇ ಹೆಚ್ಚಿರುವಾಗ ಹಳಿಯನ್ನು ಬಿಟ್ಟು ಓಡುವ ಸ್ವಾತಂತ್ರ್ಯ ರೈಲಿಗೆ ಮಾತ್ರ ಏಕೆ ಬೇಡ?
  • "ಹಾಗೂ ಅಲ್ಲ, ಹೀಗೂ ಅಲ್ಲ, ಅವರವರ ಸಂಸ್ಕೃತಿ ಅವರವರನ್ನು ಕಾಯಬೇಕಾಗಲಿ, ಅಪ್ಪ ಅಮ್ಮ ಕಾಯಲು ಆಗುತ್ತದೆಯೇ?"
  • ಸಂಸ್ಕೃತಿ ಎಂಬುದು ಮುಳ್ಳು ಬೇಲಿ. ಹೆಂಣಿನ ಶೀಲವನ್ನು ಕಾಯಲು ಅದೊಂದೇ ಸಾಕು.
  • ಸಾಲಂಕೃತ ಅಂದರೆ ಸಾಲವನ್ನು ಮಾಡಿ ಕನ್ನೆಗೆ ಮದುವೆ ಮಾಡಿ ಹೊರಸಾಗಿಸಿದರು.
  • ಕಾಲರಾಯ ನುಂಗಲಾರದ ದುಃಖ ಎಂಬುದಿದೆಯೇ, ಈ ಸೃಷ್ಟಿಯಲ್ಲಿ? ವೃದ್ಧಾಪ್ಯದಲ್ಲಿ ಯೌವನದ ಮಗನನ್ನು ಕಳೆದುಕೊಂಡು ಮರೆತವರಿದ್ದಾರೆ.
*ಮುಂದಿನ ಬ್ಲಾಗ್ ಬರವಣಿಗೆ ಮುಂದಿನ ಶುಕ್ರವಾರ.
ಈಗ ನನ್ನ ಮುಕ್ತಕ.

ಹಲ್ಲಿನ ಡಾಕ್ಟರಲ್ಲಿ....
"ಒಂದು ಹಲ್ಲನು ಕಿತ್ತು ಎರಡು ಹಲ್ಲಿನ ಫೀಜು 
ನೀವು ಕೇಳುವುದು ಏತಕ್ಕೆ?"
"ಈ ಹಲ್ಲು ಕಿತ್ತಾಗ ನೀ ಕೂಗಿಕೊಂಡಾಗ 
ಓಡಿ ಹೋದನು ಒಬ್ಬ, ಅದಕೆ!"            
                                                     **********

`

    ಬುಧವಾರ, ಅಕ್ಟೋಬರ್ 24, 2012

    ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
    (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
    • ಉಪದೇಶ ಕೊಡುವ ಧಾರಾಳತೆಗೆ ನಮ್ಮ ಜನತೆಯಲ್ಲಿ ಕೊರತೆಯೇ?  ಮಾಡು ಇಲ್ಲವೇ ಉಪದೇಶ ಮಾಡು ಎಂಬುದೇ  ನಮ್ಮ ತತ್ವ ಅಲ್ಲವೇ?
    • ಆದರೆ ತಲೆ ಮಾತ್ರವೇ ಮನುಷ್ಯನಲ್ಲವಲ್ಲಾ? ಹೃದಯವೆಂಬುದೂ ಒಂದಿರುತ್ತದೆ ಸ್ವಾಮಿ!
    • ಹೃದಯಕ್ಕೆ ತಲೆ ಇಲ್ಲ, ತಲೆಗೆ ಹೃದಯವಿಲ್ಲ, ಆದರೆ ಈ ಎರಡೂ ಮಾನವನಿಗಿರುತ್ತವೆ.
    • ಅಧಿಕಾರವೆಂದರೇನು? ಅದೊಂದು ದೇವನ ಹೆಂಡ. ಅದರ ಅಮಲಿನಲ್ಲಿ ಎಲ್ಲವನ್ನೂ ಮರೆಯುತ್ತಾರೆ.
    • ತಂದೆ ತಾಯಿಗಳು ಮಕ್ಕಳನ್ನು ಕೆಡಿಸುವುದಕ್ಕೆ ಎರಡು ಆಯುಧಗಳಿವೆ-ಒಂದು ಬೆತ್ತ, ಇನ್ನೊಂದು ಅತಿ ಪ್ರೀತಿ. ಈ ಎರಡನ್ನೂ ಸಮಯೋಚಿತವಾಗಿ ಉಪಯೋಗಿಸಿದರೆ ಮಕ್ಕಳು ಚೆನ್ನಾಗಿಯೇ ಆಗುತ್ತವೆ, ಒಳ್ಳೆಯ ಪ್ರಜೆಯಾಗಿ ಬಾಳುತ್ತವೆ ಕೂಡ.
    • "ನಾನು ದೇವರನ್ನು ನಂಬುವುದಿಲ್ಲ. ಆದರೆ ದೈವೀ ಪ್ರತೀಕಾರವೆಂಬುದಂತೂ ಇದ್ದೇ ಇದೆಯಲ್ಲ!"
    ಮುಕ್ತಕ.
    ಸುಭಾಷಿತ 
    ಅತಿಯಾದ ಬಳಕೆಯು ಬೆಲೆಯನು ಕಳೆವುದು 
    ಇದಕೊಂದು ಸಾಮತಿಯಿಹುದು.
    ಮಲಯ ಪರ್ವತದಲ್ಲಿ ಚಂದನ ವೃಕ್ಷವು 
    ಭಿಲ್ಲರ ಒಲೆಯುರಿಸುವುದು.
                                                            **********

      ಸೋಮವಾರ, ಅಕ್ಟೋಬರ್ 22, 2012


      ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
      (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
      • ಡಾಕ್ಟರ್ ಜಿ. ರಾಂಕ್ ಎಂಬ ಮಾನಸ ಶಾಸ್ತ್ರಜ್ಞ ಈ ಜಾತಿ ಪದ್ಧತಿಯಿಂದ ಮಾನವನ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳ ಒಂದು ಯಾದಿಯನ್ನೇ ಸಿದ್ಧಪಡಿಸಿದ್ದಾನೆ.
      • ಜಾತಿ ಒಂದು ಅಗ್ಗದ ಅಫೀಮು.
      • ತನ್ನ ಬಗ್ಗೆ ಏನನ್ನೂ ಹೇಳಿಕೊಳ್ಳಲು ಇಲ್ಲದವನು ತನ್ನ ಜಾತಿಯನ್ನು ಹೇಳಿಕೊಳ್ಳುತ್ತಾನೆ.
      • ಯಾವನೂ ತನ್ನ ಜಾತಿಗಾಗಿ ನಾಚಿಕೆ ಪಡಬೇಕಾಗಿಲ್ಲ. ಅಂತೆಯೇ ಯಾವನೂ ಹೆಮ್ಮೆಪಟ್ಟುಕೊಳ್ಳಬೇಕಿಲ್ಲ.ಅದಕ್ಕವನು ಜವಾಬ್ದಾರನಲ್ಲವಲ್ಲ?
      • ತಪ್ಪು ಮಾಡಿದವನು ಕ್ಷಮಾಪಣೆ ಬೇಡುವುದರಲ್ಲಿ ನಾಚಿಕೆ ಏಕೆ? ತಪ್ಪನ್ನೊಪ್ಪಿಕೊಂಡು ಕ್ಷಮಾಪಣೆ ಬೇಡುವುದು ಸುಸಂಸ್ಕೃತ ಮನುಷ್ಯನ ಮೊಟ್ಟ ಮೊದಲ ಲಕ್ಷಣ.
      • ಜಾತಿಗೆ ಬೆಲೆ ಇದೆ, ನೀತಿಗೆ ಬೆಲೆ ಇಲ್ಲ. ಹಣಕ್ಕೆ ಬೆಲೆ ಇದೆ, ಗುಣಕ್ಕೆ ಬೆಲೆ ಇಲ್ಲ. ಮೌಢ್ಯತೆಗೆ ಬೆಲೆ ಇದೆ, ವಿವೇಚನೆಗೆ ಬೆಲೆ ಇಲ್ಲ-ಇದು ನಮ್ಮ ಸಮಾಜ.
      • ಜೇಲು ಅಂದರೆ ನನಗೆ ತುಂಬಾ ಇಷ್ಟ. ಇಲ್ಲಿ ನೂರೆಂಟು ಜಾತಿಗಳ ಜಂಜಾಟವಿಲ್ಲ. ಮೇಲ್ಜಾತಿ, ಕೀಳ್ಜಾತಿ ಎಂಬ ಅಯೋಗ್ಯ ಮತ್ತು ದಡ್ಡ ಕಲ್ಪನೆಗಳಿಲ್ಲ. ಎಲ್ಲರೂ ಒಂದೇ ಜಾತಿ. ನೀವು ಹೊರಗಡೆ ಇನ್ನೂ ಕನಸು ಕಾಣುತ್ತಿರುವ ಜಾತ್ಯತೀತ ಸಮಾಜ ಇಲ್ಲಿ ಎಂದೋ ಹುಟ್ಟಿದೆ.
      ಶುಕ್ರವಾರದ ಮುಕ್ತಕದ ಒಗಟು: ಮೊದಲ ಮೂರು ಪ್ರಶ್ನೆಗಳಿಗೆ ಕೊನೆಯ ಸಾಲಿನಲ್ಲಿರುವ ಮೂರು ಶಬ್ದಗಳೇ ಕ್ರಮವಾಗಿ ಉತ್ತರ!
      ಇನ್ನು ಮುಂದಿನ ಮುಕ್ತಕ. ಧಾಟಿ ಹಿಡಿಯಲು  ಏನಯ್ಯ  ನೀಕೊಟ್ಟ  ಚಾಕಪ್ಪಿ ನೊಳಗೊಂದು  ನೊಣಬಿದ್ದು  ಸತ್ತಿದೆ  ಮಾಣಿ ಹೀಗೆ ಬಿಡಿಸಿ ಒಮ್ಮೆ ಓದಿಕೊಳ್ಳಿ.
      ಹೋಟೆಲಿನಲ್ಲಿ 
      "ಏನಯ್ಯ, ನೀ ಕೊಟ್ಟ ಚಾಕಪ್ಪಿನೊಳಗೊಂದು 
      ನೊಣ ಬಿದ್ದು ಸತ್ತಿದೆ ಮಾಣಿ"
      "ಚಾ ಒಳ್ಳೆ ಬಿಸಿಯುಂಟು ನೊಣ ಬಿದ್ದರದರಲ್ಲಿ 
      ಬದುಕಿರಲಾರದು ಕಾಣಿ!"
                                                                        ************

      ಶುಕ್ರವಾರ, ಅಕ್ಟೋಬರ್ 19, 2012


      ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
      (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
      • ನಿಮ್ಮ ಜಾತಿ ಯಾವುದು? ಎಂದು ಯಾರನ್ನೇ ಆಗಲಿ ಕೇಳುವುದು ಒಳ್ಳೆಯ ಅಭಿರುಚಿಯಲ್ಲ ಮಾತ್ರವಲ್ಲ, ಇದು ಶುದ್ಧ ಮತ್ತು ಸ್ಪಷ್ಟವಾದ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ. 
      • ಜಾತಿ ಎಂಬುದು ಮುಖ್ಯವಲ್ಲ. ಒಂದು ಜಾತಿಯಲ್ಲಿ ಹುಟ್ಟಲು ಯಾರೂ ದೊಡ್ಡದಾಗಿ ತಪಸ್ಸು ಮಾಡಿ ಹುಟ್ಟಿಲ್ಲ. ಹುಟ್ಟು ಎಂಬುದೇ ಕೇವಲ           ಆಕಸ್ಮಿಕ.
      • ಜಾತಿ ಎಂದರೇನು? ಅದು ಎಂದೋ ನಿಂತ ಕೊಳೆತ ನೀರಾಗಿದೆ. ದುರ್ನಾತಕ್ಕೆ ಎಡೆ ಕೊಟ್ಟಿದೆ. 
      • ಮಾನಸಿಕ ಅನಾರೋಗ್ಯಕ್ಕೆ ಜಾತಿಯೇ ತವರೂರು.
      • ಮಹಾಮೇಧಾವಿ  ಬರ್ಟ್ರೆಂಡ್ ರಸೆಲ್ ಜಾತಿಯ ಬಗ್ಗೆ ಏನು ಹೇಳಿದ್ದಾನೆ? ನನಗಾವ ಜಾತಿಯೂ ಸಮ್ಮತವಲ್ಲ, ಎಲ್ಲ ಜಾತಿಗಳು ಸಾಯಲಿ ಎಂದು ಆಶಿಸುತ್ತೇನೆ ಎಂದು ಒಂದೆಡೆ ನುಡಿದಿದ್ದಾನೆ.
      • ಜಾತಿಗಳಲ್ಲಿ ನಂಬಿಕೆಯುಳ್ಳವನು ಧರ್ಮದ ಹೆಸರಿನಲ್ಲಿ ಕೆಡಕು ಮಾಡುತ್ತಾನೆ, ಧರ್ಮದ ಗದ್ದುಗೆಯ ಮೇಲೆ ಕುಳಿತು ಮಾನವ ಧರ್ಮವನ್ನೇ  ಮರೆಯುತ್ತಾನೆ. 
      • ತಾವು ಉತ್ತಮ ಜಾತಿ ಎಂದು ತಿಳಿದ ಅನೇಕರು ತಮ್ಮ ಜಾತಿಯನ್ನು ಕಟುಕನು ತನ್ನ ಚಾಕುವನ್ನು ಉಪಯೋಗಿಸುವಂತೆ ಉಪಯೋಗಿಸುತ್ತಾರೆ.
      ಇನ್ನು ಒಂದು ಮುಕ್ತಕ.
      ಒಗಟು 
      ಸಾವಿರ ಕಣ್ಣುಗಳಾರಿಗೆ? ಊಟದ 
      ಕೊನೆಯಲಿ ಬಡಿಸುವುದೇನು?
      ಕಡುಪಾಪಿಯಾದಗೆ ಸ್ವರ್ಗವು ಸಿಗುವುದೆ?
      ಇಂದ್ರಗೆ ಮಜ್ಜಿಗೆ ಸಿಗದು!
                                                               ************

      ಬುಧವಾರ, ಅಕ್ಟೋಬರ್ 17, 2012


      ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
      (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
      • ಕುಡಿತವನ್ನು ಕೊಂಡಾಗ ಕಿಸೆಯಲ್ಲಿನ ಕಾಸು ಹೋಗುತ್ತದೆ. ಬೆಳಗಾದ ನಂತರ ಕುಡಿತದ ಅಮಲು ಹೋಗುತ್ತದೆ. ಅಷ್ಟಿಷ್ಟು ತಿಂದನಂತರ ಅದರ ವಾಸನೆಯೂ ಹೋಗುತ್ತದೆ. ಆದರೆ ಕುಡಿತ ಮುಖದಲ್ಲಿ ಮಾಡುವ ಗುರುತು?   `ಇವನು ಕುಡುಕ' ಎಂದು ಬೋರ್ಡು ಬರೆದು ಹಣೆಯ ಮೇಲೆ ಹಚ್ಚುತ್ತದೆ.
      • ಕೆಲವರು ಅನುಗಾಲವೂ ತಮ್ಮ ಭವಿಷ್ಯದ ಬಗ್ಗೆಯೇ ಯೋಚಿಸುತ್ತ ಕುಳಿತು ತಮ್ಮ ಇರುವಿಕೆಯನ್ನು ಹಾಳು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸದಾ ತಮ್ಮ ಗತಜೀವನವನ್ನು ನೆನೆಯುತ್ತ ಇಂದು ಎಂಬುದನ್ನೆ ಮರೆಯುತ್ತಾರೆ. ಅಂತೂ ವರ್ತಮಾನ ಕಾಲದಲ್ಲಿ ಇಬ್ಬರೂ ಇಲ್ಲ. ಇಂತಹರು ಬುದ್ಧಿವಂತ ಪಶುಗಳು.
      • ನಿನ್ನೆ ಎಂಬುದು ಹೋಯ್ತು, ನಾಳೆ ಬರುವುದು ಅನುಮಾನ, ಇಂದು ಎಂಬುದೊಂದೇ ಸತ್ಯ. ನಾನೂ ಉಮರನ ವಿಚಾರ ಸರಣಿಯವನು.
      • "ನಿಮ್ಮ ಜಾತಿ ಯಾವುದು ಎಂದು ಕೇಳಬಹುದೇ, ಮಿಸ್ಟರ್?"   "ಥುತ್! ಅಯೋಗ್ಯರ ತಲೆಯಲ್ಲಿ ಅಯೋಗ್ಯ ವಿಚಾರಗಳೇ ಬರುತ್ತದೆ. ನಿನ್ನಂತಹ ಕ್ಷುಲ್ಲಕ ಮನುಷ್ಯ ನನ್ನ ಆತ್ಮ ಚರಿತ್ರೆ ಬರೆದುಕೊಳ್ಳಲೂ ಯೋಗ್ಯನಲ್ಲ. ಹೋಗು, ಹಾಳಾಗಿ ಹೋಗು"
      • ಹುಟ್ಟಿದ ಜಾತಿಗೂ ಬದುಕಿ ಬಾಳುತ್ತಿರುವ ಜಾತಿಗೂ ಯಾವ್ಯಾವ ಸಂಬಂಧವೂ ಇಲ್ಲ.
      • ಮಾನವ ಜಾತಿ ಎಂದು ಹೇಳಿಕೊಳ್ಳುವ ಯೋಗ್ಯತೆ ಇಲ್ಲದವರೂ ಇದ್ದಾರೆ. ಪ್ರಾಯಶಃ ಅವರೇ ಹೆಚ್ಚಿದ್ದಾರೆ.
      • ಈ ಜಾತಿಯಿಂದ ಯಾರಿಗಾವ ಉಪಯೋಗವಿದೆ. ದಡ್ಡ ಜನತೆಯನ್ನು ಸ್ವಾರ್ಥಕ್ಕಾಗಿ  ಉಪಯೋಗಿಸಿಕೊಂಡು ಮತಗಳನ್ನು ನುಂಗಿ ದೊಡ್ದವರೆನಿಸಿಕೊಳ್ಳುವ ಬೆಂಕಿ ಕೋಳಿಗಳಾದ ರಾಜಕಾರಿಣಿಗಳಿಗೆ ಚುನಾವಣೆ  ಸಮಯದಲ್ಲಿ ಮಾತ್ರ ಇದರ ಉಪಯೋಗ.
      ಇನ್ನು ನನ್ನದೊಂದು ಮುಕ್ತಕ.

      ಮೋಸ 
      " ನಿನ್ನನೆ ನಂಬಿದ ಜನರಿಗೆ ಮೋಸವ 
      ಏಕೆ ಮಾಡುವುದಯ್ಯ  ನೀನು?"
      " ನನ್ನನು ನಂಬದ ಜನರಿಗೆ ಮೋಸವ 
      ಹೇಗೆ ಮಾಡುವುದಯ್ಯ ನಾನು?"
                                                                **********

      ಸೋಮವಾರ, ಅಕ್ಟೋಬರ್ 15, 2012


      ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
      (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
      • ಸುಳ್ಳನ್ನು ನಂಬಿದಷ್ಟು ಸುಲಭವಾಗಿ ಯಾವ ಸಮಾಜವೂ ಸತ್ಯವನ್ನು ನಂಬಲು ಸಾಧ್ಯವಿಲ್ಲ.
      • ಇದು ಆತ್ಮಚರಿತ್ರೆ. ಜಗತ್ತಿನ ಮುಂದು ತನ್ನ ಆತ್ಮವನ್ನು ಬೆತ್ತಲೆಯಾಗಿ ನಿಲ್ಲಿಸಬೇಕು.ಅದಕ್ಕೆ ಬೇಕಾದುದು ಒಂದೇ ಒಂದು-ಬೌದ್ಧಿಕ ಪ್ರಾಮಾಣಿಕತೆ. ಇದು ಇಲ್ಲದವನು ಆತ್ಮಚರಿತ್ರೆ ಬರೆಯುವ ಉದ್ಧಟತನಕ್ಕೆ ಎಂದೂ ಕೈಹಾಕಬಾರದು.
      • ಜೀವನದ ಬರೀ ಗೆಲುವುಗಳನ್ನಷ್ಟೇ ಲಿಸ್ಟ್ ಮಾಡಿ ಸಾಲಾಗಿ ಪೋಣಿಸಿ ಬರೆದರೆ ಅದು ಆತ್ಮಚರಿತ್ರೆ ಆಗುವುದಿಲ್ಲ. ಆತ್ಮಪ್ರತಿಷ್ಠೆ ಚರಿತ್ರೆ ಆಗುತ್ತದದು.
      • ಗಾಂಧೀಜಿಯವರನ್ನೇ ಪೂರ್ತಿಯಾಗಿ ಮರೆತಿರುವ ಭಾರತದಲ್ಲಿ ಅವರು ಹೇಳಿರುವ ಒಂದು ಮಾತನ್ನು ಮರೆಯುವುದರಲ್ಲಿ ಏನೂ ಆಶ್ಚರ್ಯವಿಲ್ಲ. 
      • ನಮ್ಮ ದೇಶದ ಚರಿತ್ರೆಯಲ್ಲಿ ಒಬ್ಬನೇ ಗಾಂಧಿ, ಒಬ್ಬರೇ ಲಾಲ್ ಬಹದ್ದೂರ್ ಶಾಸ್ತ್ರಿ.  ಅನಂತರದವರೆಲ್ಲ ಎಲೆಕ್ಷನ್ ಗಾಂಧಿಗಳು, ಬೈ ಎಲೆಕ್ಷನ್ ಶಾಸ್ತ್ರಿಗಳು.
      • ಪ್ರಾಮಾಣಿಕ ಕಳ್ಳ, ಸತ್ಯಸಂಧನಾದ ರಾಜಕೀಯ  ಪುಢಾರಿ, ಸತಿ ಸೂಳೆ! ಹೀಗೂ ಉಂಟೆ? ಯಾಕಿರಬಾರದು?
      ಇನ್ನು ಒಂದು ಮುಕ್ತಕ. 
      ನಾದ 
      `ನಾನೆಷ್ಟು ಚೆನ್ನಾಗಿ ಹಾಡಿದೆ ಗೊತ್ತೇನು? 
      ನಾದ ತುಂಬಿತು ಸಭೆಯೊಳಗೆ'
      `ಇರಬೇಕು, ಅದರಿಂದ ಜಾಗವೆ ಸಾಲದೆ 
      ಜನ ಹೋಗುತಿದ್ದರು ಹೊರಗೆ!' 
                                                                ***********


        ಶುಕ್ರವಾರ, ಅಕ್ಟೋಬರ್ 12, 2012


        ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
        (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
        • ನಗೆ ಯಾರಪ್ಪನ ಆಸ್ತಿಯೂ ಅಲ್ಲ. ಅದನ್ನಾವ ಲಕ್ಷ್ಮೀಪುತ್ರನೂ ಗುತ್ತಿಗೆ ಹಿಡಿದಿಲ್ಲ.
        • ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿರುವವರಲ್ಲಿ ಆಳುವವರೇ  ಹೆಚ್ಚು.
        •  ಸುಖ ಪಡುವುದರಲ್ಲಿ ಅಷ್ಟು ಸುಖವಿಲ್ಲ. ಕಷ್ಟದಲ್ಲಿರುವಾಗ ಆಗುವ ಸುಖದ ನೆನಪು ಹೆಚ್ಚಿನ ಸುಖ.
        • ಇನ್ನೊಬ್ಬರ ಮನಸ್ಸನ್ನು ಓದಲು ಬರುವಂತಿದ್ದರೆ ಈ ಜಗತ್ತಿನ ಕಥೆಯೇ ಬೇರೆಯಾಗುತ್ತಿತ್ತು ಪ್ರಾಯಶಃ.
        • ಜೇಲಿನಲ್ಲಿರುವವರೆಲ್ಲರೂ ಕಳ್ಳರು, ಆದರೆ ಹೊರಕ್ಕಿರುವವರೆಲ್ಲರೂ ಸುಸಂಪನ್ನರೆ? ಗರ್ಭಿಣಿಯಾದ ವಿಧವೆ ಮಾತ್ರವೇ ವ್ಯಭಿಚಾರಿಣಿ ಈ ಧೃತರಾಷ್ಟ್ರ ಸಮಾಜದ ಗಜುಗ ಕಂಣಲ್ಲಿ.
        • ವ್ಯಕ್ತಿಗೆ ವ್ಯಕ್ತಿ ನಮಸ್ಕಾರ  ಅನ್ನುವುದು ಒಂದು ಸುಸಂಸ್ಕೃತಿಯ ಕುರುಹು. ಸ್ಥಾನ, ಮಾನ ಇವೆಲ್ಲವೂ ಸಾಮಾನ್ಯ ದಡ್ಡರಿಗಷ್ಟೇ.
        • ದೇವನ ಸಹಾಯವನ್ನೂ ಎಡಕಾಲಿನಿಂದ ಒದೆಯುವ ಮನೋದಾರ್ಡ್ಯ (ದೊಡ್ಡ ಡ ಎಂದು ಓದಿಕೊಳ್ಳಿ) ಉಳ್ಳವನೇ ನನ್ನ ದೃಷ್ಟಿಯಲ್ಲಿ ದೇವರು.
        ಇಂದಿಗಿಷ್ಟು. ಇನ್ನು ನನ್ನದೊಂದು ಮುಕ್ತಕ.
        ನೀತಿ 
        ಅತಿಯಾಗಿ ಉರಿದರೆ ಅತಿ ಬೇಗ ಆರುವೆ 
        ಮದ್ಯಸಾರದ ಉರಿಯ ರೀತಿ.
        ಮಿತಿಯಿಂದ ಇದ್ದರೆ ಬಹುಕಾಲ ಬಾಳುವೆ 
        ಹರಳೆಣ್ಣೆ ದೀಪದ ನೀತಿ.

        ಶುಕ್ರವಾರ, ಅಕ್ಟೋಬರ್ 5, 2012

        ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
        (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ :9845264304)
        • ಗಂಟೆ ಆರೋ, ಒಂಬತ್ತೋ, ಹನ್ನೊಂದೋ ಆಗಿರಬೇಕು. ಪಿಂಚಿನಿ  ಪುರುಷನಿಗೆ ಈ ಮೂರೂ ಒಂದೇ ತಾನೆ?  ಬೇಗ ಎದ್ದರೆ ಲಾಭವಿಲ್ಲ, ತಡವಾಗಿ ಎದ್ದರೆ ನಷ್ಟವಿಲ್ಲ.
        • ಟೆಲಿಫೋನು ಒಂದು ದುಬಾರಿ ಶತ್ರು. ನಮಗೆ ಯಾರು ಬೇಕೋ ಅವರು ಸಿಕ್ಕುವುದಿಲ್ಲ. ಯಾರು ಬಹಳ ಬೇಡವೋ ಅವರ ಕೈಗೆ ನಾವು ಸಿಕ್ಕಿಬೀಳುತ್ತೇವೆ.
        • ಟೆಲಿಫೋನು ಸುಮ್ಮನಾಯಿತೆಂದು ಸಂತೋಷಪಡುವವನು ದಡ್ಡ. ಅದು ಸುಮ್ಮನಾಗುವುದು ಮತ್ತೆ ಬಾರಿಸಲಿಕ್ಕೇ.
        • ಯಾರಾದರೂ ನಾವಿಲ್ಲದಾಗ ಮನೆಗೆ ಬಂದು, ಬಂದೊಡನೆ ಅವರನ್ನು ಕಾಣಲು ಹೇಳಿ ಹೋದರೆ ಒಂದೇ ಅರ್ಥ ಕೆಲಸ ಅವರದು-ನಮ್ಮದಲ್ಲ, ನಮಗೆ ಹಣ ಕೊಡುವವರು ಉಪಕಾರ ಮಾಡುವವರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆಯೇ?
        • ಡಿಗ್ರಿ ಬೇರೆ. ನಡತೆ ಬೇರೆ. ಇದಕ್ಕೂ ಅವಕ್ಕೂ ಸಂಬಂಧವೇ ಇಲ್ಲ.
        • "ಹೌದು, ಸರಕಾರಿ ಕೆಲಸದಲ್ಲಿ ಇವೆಲ್ಲ ಶ್ರಾದ್ಧ ನಿಯಮಗಳಿದ್ದಂತೆ. ಮಾಡದಿದ್ದರೆ ತಪ್ಪು; ಮಾಡಿದರೆ ಪ್ರಯೋಜನವಿಲ್ಲ"
        ಇಂದಿಗಿಷ್ಟು. ಇನ್ನು ಸೋಮವಾರ. ಈಗ ನನ್ನ ಒಂದು ಮುಕ್ತಕ.
        ಹದ್ದಿಗೆ 
        ಆಕಾಶದೆತ್ತರ ಹಾರಾಡುತಿದ್ದರು 
        ನೀನರಸುವುದೊಂದು ಹೆಣವ.
        ಹದ್ದೆ ನಿನ್ನಂತೆಯೆ ಕೆಲರು ಮೇಲೇರುವ 
        ರರಸಲು ಪರರವಗುಣವ.
                                                                  **********

        ಬುಧವಾರ, ಅಕ್ಟೋಬರ್ 3, 2012

        ಬೀchi ಯವರ `ಆಟೋ' ಕಾದಂಬರಿಯಿಂದ.....
        (ಪ್ರ:ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020)

        • "ಬಳ್ಳಾರಿಯ ಬ್ರಾಹ್ಮಣರು ಬಾಳೆಯ ಎಲೆಯಲ್ಲಿ ಉಂಡಂತೆ" ಎಂದೊಂದು ಮಾತು ಚಲಾವಣೆಯಲ್ಲಿದೆ ಆ ಭಾಗದಲ್ಲಿ. ನಾಳೆಗೆ ಕೆಟ್ಟು ಹೋಗಬಹುದಾದ್ದನ್ನು ಅಂದರೆ ಸಾಕಷ್ಟು ಬಾಡಿದ ಎಲೆಯನ್ನೇ, ಇಂದು ಉಪಯೋಗಿಸುವುದು. ನಾಳೆಯೂ ಮತ್ತೆ ಇದೆ ಕತೆಯೇ! ಅಂತೂ ಒಳ್ಳೆಯ ಎಲೆಯಲ್ಲಿ ಉಂಣುವುದು ಇವರ ಹಣೆಯಲ್ಲಿಯೇ ಇಲ್ಲ. ನಾಳೆಗೆ ಕೆಡುವ ಮತ್ತು ಇಂದು ಬಾಡಿದ ಎಲೆ ತಪ್ಪಿದರಲ್ಲವೆ, ಆ ಪ್ರಾಣಿ ಎಂದಾದರೂ ಒಳ್ಳೆಯ ಹೊಚ್ಚ ಹಸಿರು ಎಲೆಯನ್ನು ಹಾಸಿ ಉಂಣಬೇಕು?
        • ಓರ್ವ ಜಾಣನ ಮುಖಕ್ಕೆ ಆರತಿ ಎತ್ತಲು ನೂರೆಂಟು ಬಡಪಾಯಿ ಬಕರಾಗಳು ಗುಂಪು ಕಟ್ಟಬೇಕು.
        • ಜೀವನದಲ್ಲಿ ಆಶಾಭಂಗವನ್ನು ತಪ್ಪಿಸಿಕೊಳ್ಳಲು ಒಂದೇ ಉಪಾಯ. ಯಾವುದನ್ನೂ ಆಶಿಸಲೇಬಾರದು?
        • ಲೋಕದ ರೀತಿಯೇ ಹೀಗೆ-ಕಾಲಿನಿಂದ ಒದೆಯುವವನನ್ನು ಕಂಡು ಕೈ ಮುಗಿಯುತ್ತದೆ, ಕೈ ಮುಗಿಯುವವನ ತಲೆಯ ಮೇಲೆ ಕಾಲಿಡುತ್ತಾ  ನಡೆಯುತ್ತದೆ.
        ಇಲ್ಲಿಗೆ `ಆಟೋ'ದಿಂದ ಆಯ್ದದ್ದು ಆಯಿತು. ಇನ್ನು ಶುಕ್ರವಾರ. ಈಗ ನನ್ನದೊಂದು ಮುಕ್ತಕ.
        ಸುಭಾಷಿತ 
        ಅಕ್ಷರಗಳು ಸಮ ಸಮನಾಗಿ ಇರಬೇಕು 
        ಉರುಟು ದೃಢತೆ ಬೇಕು ಮತ್ತೆ.
        ಒಂದಕೊಂದಕೆ ಅವು ಮುಟ್ಟದಂತಿರಬೇಕು 
        ತರುಣಿಯ ಕುಚಯುಗ್ಮದಂತೆ!
                                                               **********

        ಸೋಮವಾರ, ಅಕ್ಟೋಬರ್ 1, 2012

        ಬೀchi ಯವರ `ಆಟೋ' ಕಾದಂಬರಿಯಿಂದ.....
        (ಪ್ರ:ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020)
        • ಕಂಣೀರು  ಸುರಿಸುವುದೊಂದೇ ಹೆಂಣಿನ ಕೆಲಸವಾಗಿದ್ದರೆ ಎಲ್ಲ ಹೆಣ್ಣುಗಳೂ ಬರೀ ಅದನ್ನೇ ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನೂ ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿಬಿಡುತ್ತಿದ್ದವು.
        • ಹೊಟ್ಟೆಯ ಹಸಿವು ಬಾಳಿನ ಯಾವ ದುಃಖಕ್ಕೂಸೊಪ್ಪು  ಹಾಕುವುದಿಲ್ಲ.
        • "ನಿನ್ನ ಕಷ್ಟ, ನಿನ್ನ ಸುಖ ನಿನ್ನವು. ನನಗೆ ಕೊಡಬೇಕಾದುದನ್ನು ಮೊದಲು ಕೊಡು." ಎನ್ನುತ್ತದೆ ಹೊಟ್ಟೆ, ಟ್ಯಾಕ್ಸ್ ಇನ್ಸ್ ಪೆಕ್ಟರನಂತೆ. ಕೊಡಬೇಕು ಅಹುದು. ಆದರೆ ಎಲ್ಲಿಂದ? ಅದು ಹೊಟ್ಟೆಗೆ ಸಂಬಂಧಿಸದ ಪ್ರಶ್ನೆ.
        • ಎಲ್ಲಿಂದ ತಂದು ಹಾಕಿದರೂ ಅದು ತಿನ್ನುತ್ತದೆ. ಅದಕ್ಕೆ ನಿಯಮ, ನಿಯತ್ತುಗಳ ಕಾಟ ಒಂದೂ ಇಲ್ಲ. ಕಳ್ಳನ ಹೊಟ್ಟೆ ಅವನ ಅನ್ನ ಬೇಡ ಎನ್ನುವುದಿಲ್ಲವಲ್ಲ? ಬೇಡ ಎನ್ನದಿರುವುದಷ್ಟೇ ಅಲ್ಲ, ಅವನನ್ನು ಕಳ್ಳತನಕ್ಕೆ ಹಚ್ಚುವುದೇ ಆ ಹೊಟ್ಟೆ. ಅದಕ್ಕೇನು? ಅವನು ಜೇಲಿನಲ್ಲಿದ್ದರೂ ಅಲ್ಲಿಯೂ ಅದನ್ನು ಯಾರೋ ತುಂಬುತ್ತಾರೆ. ಅಂತೂ ತುಂಬುತ್ತಿರಬೇಕು ಅದನ್ನು ಆಗಾಗ್ಗೆ.
        • ತಂದೆ ಒಂದು ತಪ್ಪು ಮಾಡುತ್ತಾನೆ, ಮಗನು ಅದರಿಂದ ಸಹಜವಾಗಿಯೇ ಪಾಠ ಕಲಿಯುತ್ತಾನೆ. ತತ್ಫಲವಾಗಿ ಆ ತಪ್ಪನ್ನು ಬಿಟ್ಟು ಬೇರೊಂದು ಹೊಸತನ್ನು ಇವನು ಮಾಡುತ್ತಾನೆ!
        • ಆದರ್ಶವು ತಲೆಯನ್ನೊಯ್ದು ಆಕಾಶದಲ್ಲಿಡುತ್ತದೆ. ಬಾಳು ಕಾಲನ್ನು ನೆಲಕ್ಕೆ ತಂದು ನಿಲ್ಲಿಸುತ್ತದೆ.
        • ನಾಳೆಗೆ ಅಂಜುವ ಹೇಡಿಯೊಬ್ಬನು ಬೇಡವೆಂದರೆ ಬೆಳಗಾಗದೆ ಇರಲು ಆಗುತ್ತೆಯೇ?
        ಇಂದಿಗೆ ಇಷ್ಟು. ಇನ್ನು ಬುಧವಾರ. ಈಗ ನನ್ನದೊಂದು ಮುಕ್ತಕ.
        ಧಾಟಿ ತಿಳಿಯಲು, ದಪ್ಪಗಾ-ಜಿನಒಂದು -ಕನ್ನಡಕ-ಕಳೆದಿದೆ-ಸಿಕ್ಕಿದ-ವರುದಯ-ಮಾಡಿ, ಪತ್ರಿಕೆ-ಯಲಿದಪ್ಪ-ದಪ್ಪಅ-ಕ್ಷರಗಳ-ಪ್ರಕಟಣೆ-ಯೊಂದನು-ನೀಡಿ  ಹೀಗೆ ಪದಚ್ಛೆeದ ಮಾಡಿಕೊಂಡು ಒಮ್ಮೆ  ಓದಿ. 
        ಪ್ರಕಟಣೆ 
        ದಪ್ಪ ಗಾಜಿನ ಒಂದು ಕನ್ನಡಕ ಕಳೆದಿದೆ 
        ಸಿಕ್ಕಿದವರು ದಯಮಾಡಿ 
        ಪತ್ರಿಕೆಯಲಿ ದಪ್ಪದಪ್ಪ ಅಕ್ಷರಗಳ 
        ಪ್ರಕಟಣೆಯೊಂದನು ನೀಡಿ.  
                                                           *****