ಶುಕ್ರವಾರ, ಡಿಸೆಂಬರ್ 7, 2012


ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
  • ಸಂತೋಷವಾದಾಗ ಎರಡು ಬಗೆಯ ಜನಕ್ಕೆ ಹೇಳಬೇಕೆನಿಸುತ್ತದೆ- ನಮ್ಮ ಸಂತೋಷವನ್ನು ಕಂಡು ಸಂತೋಷಿಸು ವವರು ಮತ್ತು ಅಸೂಯೆಯಿಂದ ಕೊರಗುವವರು. ಅವರ ಸಂತೋಷದಿಂದ ಮತ್ತು ಇವರ ಅಸೂಯೆಯಿಂದ ನಮ್ಮ ಸಂತೋಷ ದ್ವಿಗುಣವಾಗುತ್ತದೆ - ಎರಡನೆಯದು ನಮ್ಮ ಸಣ್ಣತನ.
  • ಕನ್ನಡ ಸಾಹಿತಿಗಳನ್ನು ಕಂಡೂ ಅಸೂಯೆ ಪಡುವವರಿದ್ದಾರೆಯೇ? ಯಾಕಿಲ್ಲ? ಉಳಿದ ಕೆಲ ಸಾಹಿತಿಗಳು!
  • ಮೂಗೆಳೆದರು ಮುತ್ತುಸ್ವಾಮಿ. ನಮ್ಮನ್ನು ಹೊತ್ತು ಹಾಕಲು ಮಾರ್ಗವನ್ನು ಹುಡುಕಬೇಡವೇ? ಇದಕ್ಕಾಗಿಯೇ ಅವರಿಗೆ ದೊಡ್ಡ ಸಂಬಳ.
  • ವೃದ್ಧಾಪ್ಯ ಸುಖವಲ್ಲ ಎಂದು ದಡ್ಡ ಹೇಳಬೇಕು. ಮಕ್ಕಳು ಮೊಮ್ಮಕ್ಕಳು ಯೌವನದಲ್ಲಿ ಸಿಕ್ಕಾರೆಯೇ? ಈ ಹಿಗ್ಗು ಏನೆಂಬುದನ್ನು ಅರಿಯಲು ವೃದ್ಧಾಪ್ಯವೇ ಬೇಕು.
  • ನಾನು ಸಾಧಿಸಿರುವ ಕೆಲ ತಪಸ್ಸುಗಳಲ್ಲಿ ಇದೂ ಒಂದು. ಮರೆಯಲು ನಿರ್ಧರಿಸಿದರೆ ನನ್ನ ಮನದಿಂದ ಅದನ್ನು ಕಿತ್ತಿ ಹಾಕಿ ಹಾಯಾಗಿದ್ದುಬಿಡುತ್ತೇನೆ. ನನ್ನ ಮೂವತ್ತಾರು ವರ್ಷಗಳ ಮಿತ್ರನಾಗಿದ್ದ ಕುಡಿತ ದೂರವಾಗಿರುವುದೂ ಹೀಗೆಯೇ. ಇದು ಮನಶ್ಶಾಂತಿಗೆ  ಬಹು ಸಹಕಾರಿ.
ಇನ್ನು ನನ್ನ ಮುಕ್ತಕ:

ಹಾಸ್ಯ 
ನೀನೆಂದ ಜೋಕಿಗೆ ಇತರರು ನಗಬೇಕು 
ನೀನೆ ಹಹ್ಹಾ ಎಂಬುದಲ್ಲ.
ನಶ್ಯದ ಘಾಟಿಗೆ ಜನರೆಲ್ಲ ಸೀತರು 
ಡಬ್ಬಿಯು ಸೀನುವುದಿಲ್ಲ!
                                                        * * * * * * * * * * * *

    ಶುಕ್ರವಾರ, ನವೆಂಬರ್ 30, 2012


    ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
    ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
    • ಆದಕಾರಣ ನಮ್ಮ ಭಾರತ ಪವಿತ್ರವಾದ ದೇಶ ಎಂಬುದು ಒಂದು ವಾದ.
    • ನೆಲವನ್ನು ಮುಗಿಲನ್ನು ಹೊಲಿವರುoಟೆಂದವರ । ಹೊಲಿದರೂ ಹೊಲೆವರೆನಬೇಕು ಮೂರ್ಖನಲಿ । ಕಲಹವೇ ಬೇಡ ಸರ್ವಜ್ಞ ।। ಎಂದು ಸರ್ವಜ್ಞ  ಕವಿ ಹೇಳಿಲ್ಲವೇ?
    • ಯಾವಾಗ ಧರ್ಮ ಖಿಲವಾಗುತ್ತದೋ, ಅಧರ್ಮ ಪ್ರಬಲವಾಗುತ್ತದೋ ಆವಾಗ ನಾನು ಸಾಧುಗಳ ರಕ್ಷಣೆ, ಧರ್ಮದ ಪುನರುದ್ಧಾರಗಳಿಗಾಗಿ ಯುಗ-ಯುಗದಲ್ಲೂ ಹುಟ್ಟುತ್ತೇನೆ. ಹಾಗಾದರೆ ಧರ್ಮಕ್ಕೆ ಚ್ಯುತಿ ಬರದಿದ್ದಲ್ಲಿ ಭಗವಂತ ಅವತರಿಸುವುದಿಲ್ಲ ಎಂದಂತಾಯಿತು. ಭಗವಂತ ನಮ್ಮ ಭಾರತದಲ್ಲಿಯೇ ತನ್ನ ದಶಾವತಾರಗಳನ್ನು ಎತ್ತಿದ...... ಎಂಬುದರ ಅರ್ಥ, ಹತ್ತು ಬಾರಿಯೂ ಈ ಭಾರತದಲ್ಲಿಯೇ ಧರ್ಮಕ್ಕೆ ಧಕ್ಕೆ ಬಂತು ಎಂದು ಗ್ರಹಿಸೋಣವೇ? ಬೇರಾವ ಯುರೋಪಿಯನ್ ರಾಷ್ಟ್ರದಲ್ಲಿಯಾಗಲಿ, ಆಫ್ರಿಕಾ, ರಸಿಯಾಗಳಲ್ಲಿ ಧರ್ಮಗ್ಲಾನಿ ಆಗಲೇ ಇಲ್ಲ. ನಮ್ಮ ಭಾರತದಲ್ಲಿಯೇ ಆಯಿತು ಎಂದೊಂದು ಕಾರಣದಿಂದ ನಮ್ಮ ದೇಶ ಪವಿತ್ರವಾದ ದೇಶ, ನಮ್ಮದು ಪುಣ್ಯಭೂಮಿ ಎಂದು ಹೇಳಿಕೊಳ್ಳುವುದು ಸರಿಯೇ, ಜಾಣತನವೇ ಅಥವಾ ಹೆಮ್ಮೆಪಟ್ಟುಕೊಳ್ಳುವಂತಹ ಅಂಶವೇ?
    • ಇದನ್ನು ಹೆಮ್ಮೆಪಟ್ಟುಕೊಳ್ಳುವಂತಹ ವಿಷಯ ಎಂದಾದಲ್ಲಿ, ನಮ್ಮಲ್ಲಿಂದ ಅನೇಕರು ಧರ್ಮವನ್ನು ಹಾಳುಮಾಡುವುದರಲ್ಲಿ ತೊಡಗಿರುವಾಗ, ಅವರೆಲ್ಲರೂ ಮೇಲಿಂದಮೇಲೆ ಪರಮಾತ್ಮನ ಅವತಾರಕ್ಕೆ ಆಸ್ಪದ ಮಾಡಿಕೊಟ್ಟು, ನಮ್ಮ ದೇಶವನ್ನು ಇನ್ನೂ ಹೆಚ್ಚು ಪವಿತ್ರಗೊಳಿಸುತ್ತಿದ್ದಾರೆ, ಉಪಕರಿಸುತ್ತಿದ್ದಾರೆ ಎಂದಾಯಿತು. ಅವರೆಲ್ಲರಿಗೂ ನಾವು ಋಣಿಗಳು!
    • ನಮ್ಮೂರಲ್ಲಿ ಪೋಲಿಸ್ ಸ್ಟೇಶನ್ ಆಗಿದೆ ಎಂದು ಹೆಮ್ಮೆಪಟ್ಟುಕೊಳ್ಳುವುದರಲ್ಲಿ ಎಷ್ಟು ಅರ್ಥವಿದೆಯೋ, ನಮ್ಮ ಭಾರತದಲ್ಲಿಯೇ ದೇವರು ದಶಾವತಾರಗಳನ್ನೂ ಮಾಡಿದ್ದಾನೆ ಎಂದು ಹೆಮ್ಮೆಪಟ್ಟುಕೊಳ್ಳುವುದರಲ್ಲೂ ಅಷ್ಟೇ ಅರ್ಥವಿದೆ. 
    • ಈಗ ಯೋಚಿಸಿ, ನಮ್ಮ ಭಾರತ ಪುಣ್ಯಭೂಮಿಯೇ? ಪವಿತ್ರದೇಶವೇ?
    ಈಗ ನನ್ನ ಮುಕ್ತಕ.

    ಹೋಟೆಲಿನಲ್ಲಿ 
    "ಮರೆವಾಯ್ತೆ ಸಾರ್?" ಪ್ರೊಫೆಸರರ ಕೇಳಿದ ಮಾಣಿ,
     "ಇಲ್ಲ, ಬಕ್ಷೀಸ್ ಕೊಟ್ಟೆನಲ್ಲ."
    "ಸರಿ ಸ್ವಾಮಿ ಬಕ್ಷೀಸು ಕೊಟ್ಟಿರಿ, ಆದರೆ
    ತಿಂಡಿಯನೇ  ತಿನ್ನಲಿಲ್ಲ!"
                                                                         * * * * * * * * * *

    ಶುಕ್ರವಾರ, ನವೆಂಬರ್ 23, 2012


    ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
    ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!

    • ಅಣ್ಣ ಅ.ನ.ಕೃ.
    •  ಕೃಷ್ಣರಾಯರು ಭಾರತದ ಆಚೆ ಹೋಗಲಿಲ್ಲ ಮಾತ್ರವಲ್ಲ, ದಿಲ್ಲಿಗೂ ಹೋಗಲಿಲ್ಲ.
    • ಜೀವನವೇ ಹೀಗೆ. ಏನೂ ಅರ್ಥವಾಗದ ಅನೇಕ ಶ್ರೀಮಂತರು ಸ್ವಂತ ಖರ್ಚಿನಲ್ಲಿ ಎಲ್ಲ ದೇಶಗಳನ್ನೂ ಸುತ್ತಾಡಿ ಬರುತ್ತಾರೆ. ಅವರು ಇಲ್ಲಿಂದ ಒಯಿದುದು ಏನೂ ಇಲ್ಲ, ಅಲ್ಲಿಂದ ತಂದುದೂ ಏನೂ ಇಲ್ಲ- ಸುಂಕವನ್ನು ತಪ್ಪಿಸಿ ತಂದ ಕೆಲ ಕಳ್ಳ ವಿದೇಶೀ ವಸ್ತುಗಳ ಹೊರತು.
    • ಯಾರದೋ ತಪ್ಪಿನಿಂದ ಅಧಿಕಾರಕ್ಕೆ ಬಂದ ರಾಜಕೀಯ ಪ್ರಭುಗಳೂ ಆ ಸಮ್ಮೇಳನ, ಈ ಸಮ್ಮೇಳನ ಎಂದು ವಿದೆಶಗಳಿಗೆಲ್ಲ ಹೋಗುತ್ತಿದ್ದಾರೆ. ದಡ್ಡ ಶ್ರೀಮಂತರಂತೆ ಸ್ವಂತ ಖರ್ಚಿನಲ್ಲಲ್ಲ. ಬಡ ಜನತೆಯ ಸ್ವಂತ ಖರ್ಚಿನಲ್ಲಿ.
    • ಅವರಲ್ಲಿ ಅನೇಕರು ಇಲ್ಲಿಂದ ಒಯಿದುದೇನು? ಅಲ್ಲಿಂದ ತಂದುದೇನು? ಅಲ್ಲಿ ಹೆಚ್ಚಾಗಿ ಕುಡಿದು, ಹೋಗಿದ್ದ ಸಮ್ಮೇಳನವನ್ನು ಹಾಯಾಗಿ ಮರೆತು ಮಲಗಿ, ಎಚ್ಚರವಾದಾಗ ಎದ್ದು ಬಂದಿದ್ದಾರೆ.
    • ಮರಳಿ ಬಂದಿದ್ದಾರೆ ಎಂಬುದಕ್ಕೆ ಸಂತೋಷಪಡಬೇಕು. ಯಾರು? ಸಂತೋಷಪಡಬೇಕಾದುದು ನಮ್ಮ ದೇಶವಲ್ಲ. ಅವರವರ ಮನೆಯವರು.
    • ಎಲ್ಲ ಖರ್ಚುಗಳನ್ನು ಭರಿಸುತ್ತೇವೆ, ಬನ್ನಿ ಎಂದು ಕರೆದರೂ ಕನ್ನಡ ಹಿರಿ ಸಾಹಿತಿ ಕೃಷ್ಣರಾಯರಿಗೆ ಹೋಗಲು ಅನುವು ಇಲ್ಲ. ಖರ್ಚು ಕಳೆದರೆ ಆಯಿತೆ? ಅನ್ನದ ತಪ್ಪೇಲಿಗೆ ದುಡಿಯಬೇಡವೇ? ಇದು ನಮ್ಮ ಕನ್ನಡ ಸಾಹಿತಿಗಳ ಆರ್ಥಿಕ ಪರಿಸ್ಥಿತಿ.
    • ಅಂತೂ ಕಡಲೆ ಇರುವವರಿಗೆ ಹಲ್ಲಿಲ್ಲ, ಹಲ್ಲಿದ್ದವರಿಗೆ ಕಡಲೆ ಇಲ್ಲ.
    ಈಗ ನನ್ನ ಮುಕ್ತಕ.
    ಹೋಟೆಲಿನಲ್ಲಿ.
    "ಸೀಮೆ ಎಣ್ಣೆಯ ನಾತ ಬರುತಿದೆಯಲ್ಲಯ್ಯ,
    ಚಹವೇನು ನೀನು ಕೊಟ್ಟದ್ದು?"
    "ಅಲ್ಲ ಸಾರ್ ಅದು ಕಾಪಿ, ಚಹವಾಗಿದ್ದರೆ ಕೆಟ್ಟ 
    ಹರಳೆಣ್ಣೆ  ನಾತ ಬರುತಿತ್ತು"!
                                                         * * * * * * * * *


    ಶುಕ್ರವಾರ, ನವೆಂಬರ್ 16, 2012

    ಇಂದಿನ ಬ್ಲಾಗು ಬರೆಯಲು ಸಾಧ್ಯವಾಗಿಲ್ಲ. ದಯವಿಟ್ಟು ಕ್ಷಮಿಸಿ.
    ನನ್ನ ಮುಕ್ತಕ:

    ಕುಟುಂಬ ಯೋಜನೆ!
    ಅರುವತ್ತು ವರ್ಷದ ಮುದುಕನ ಕೈಯಲಿ
    ಎರಡು ತಿಂಗಳ ಕೂಸ ಕಂಡು
    "ಮಗನೇನು?" ಎಂದಾಗ ಹೇಳಿದನಾತನು
    "ಅಲ್ಲ ಸ್ವಾಮೀ, ತಮ್ಮ " ಎಂದು!

    ಶುಕ್ರವಾರ, ನವೆಂಬರ್ 9, 2012

    ಬೀchi ಯವರ ದೇವರಿಲ್ಲದ ಗುಡಿ ಪುಸ್ತಕದಿಂದ.  ಪ್ರ: ಸಮಾಜ ಪುಸ್ತಕಾಲಯ,ಶಿವಾಜಿ ಬೀದಿ, ಧಾರವಾಡ-1 ಫೋ: 2791616
    ಈ ಬ್ಲಾಗು->ದೇವರಿಲ್ಲದ ಗುಡಿ->ಬೀchi ಯವರ ಇತರ ಪುಸ್ತಕಗಳು->ಕನ್ನಡದ ಇತರ ಪುಸ್ತಕಗಳು ಹೀಗೆ ಸಾಗಲಿ ಓದಿನ ದಾರಿ!
    • ಪಿಂಚನಿಯಾದವನಿಗೆ ಎಲ್ಲ ವಾರಗಳೂ ಭಾನುವಾರಗಳೇ. ಶನಿವಾರ ಎಂಬುದು ನೆನಪಿರಲು ವಿಶೇಷ ಕಾರಣ ಬೇಕು.
    • ಮನದಲ್ಲಿದ್ದುದನ್ನೂ ಆಡಲು ಅಡ್ಡ ಬರುವುದು ಸಂಸ್ಕೃತಿ. ಸಂಸ್ಕೃತಿಯೂ ಒಂದು ಬಗೆಯ ಹೇಡಿತನವೆಂದು ಅದಾರೋ ಒಬ್ಬ ಇಂಗ್ಲಿಷ್ ಸಾಹಿತಿ ಹೇಳಿದ್ದಾನೆ.
    • ಆದರೂ ರಸಿಯಾ ನನಗೆ ಹೊಸತೆ? ಶಾಲೆಯಲ್ಲಿದ್ದಾಗ ಎಷ್ಟೋ ಬಾರಿ ನೋಡಿದ್ದೇನೆ-ಭೂಪಟದಲ್ಲಿ!
    • ತಾಳಿ ಕಟ್ಟುವಾಗ ವರನಿಗೆ ಯೋಚನೆ ಮಾಡಲು ಆಸ್ಪದ ಕೊಡುತ್ತಾರೆಯೇ? ಯೋಚಿಸಲು ಸಾಧ್ಯವಾಗಬಾರದೆಂದೇ  ದೊಡ್ಡ ಕಂಠದಲ್ಲಿ ಮಂತ್ರ ಘೋಷಣೆ ಮಾಡುವುದು.
    • ಆಮೇಲೆ ಓಲಗ. ಯುದ್ಧದಲ್ಲಿ ಬ್ಯಾಂಡು ಬಾರಿಸುವುದೂ ಅದಕ್ಕೇ. ಮುನ್ನುಗ್ಗುವುದೊಂದೇ ಯೋಧನ ಕೆಲಸ.
    • ನಾನು ಧಾರಾಳವಾಗಿ ಕುಡಿಯುತ್ತಿದ್ದ ಕಾಲವದು. ಬಹು ಹಿಂದೇನಲ್ಲ, ಕೇವಲ ಒಂದೂವರೆ ವರ್ಷಗಳ ಹಿಂದು. ಆಗ ಬರಬಾರದಿತ್ತೇ ಈ ರಸಿಯಾ ಪ್ರವಾಸಯೋಗ? ಓಡ್ಕಾಕ್ಕೇ ಪುಣ್ಯವಿಲ್ಲ ನನ್ನ ಹೊಟ್ಟೆಯಲ್ಲಿ ಬರಲು. ಈಗ ಇಷ್ಟು ತಡವಾಗಿ ಬಂದಿದೆ ಓಡ್ಕಾ ದೇಶಕ್ಕೆ ಔತಣ.
    ಈಗ ನನ್ನ ಮುಕ್ತಕ.

    ದೂರು
    "ರವಿ ನನ್ನ ಗೊಂಬೆಯ ಒಡೆದನು ನೋಡಮ್ಮ"
    "ಹೇಗೆ ಒಡೆದನಪ್ಪ ಹೇಳು"
    "ಅವನ ಬೆನ್ನಿಗೆ ನಾನು ಇದರಿಂದ ಹೊಡೆದಾಗ 
    ಆಯ್ತಿದು ನಾಲ್ಕಾರು ಹೋಳು"!

    ಶುಕ್ರವಾರ, ನವೆಂಬರ್ 2, 2012


    ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
    (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
    • ಇಲ್ಲಿ ನೋಡಿ! ಕ್ಷಯರೋಗದಿಂದ ಕ್ಯಾನ್ಸರ್ ರೋಗದಿಂದ ಸತ್ತವರು ಬಹಳ ಸ್ವಲ್ಪ ಸ್ವಾಮೀ! ಎಲ್ಲಿಯೋ ನೂರಕ್ಕೆ ಒಬ್ಬರೋ ಇಬ್ಬರೋ ಈ ರೋಗದಿಂದ ಸತ್ತಿರಬೇಕಷ್ಟೆ. ಉಳಿದ ತೊಂಭತ್ತೆಂಟು ತೊಂಭತ್ತೊಂಭತ್ತು ಜನ ಬರೀ ರೋಗದ ಹೆಸರನ್ನು ಕೇಳಿಯೇ ಸತ್ತಿದ್ದಾರೆ.
    • ನಾಲಗೆಗೆ ರಜಕೊಟ್ಟು, ಕಿವಿಗೆ ಕೆಲಸವನ್ನು ಕೊಟ್ಟೆ. ಇದು ಸಾಧಾರಣವಾಗಿ ಅನೇಕರಿಗೆ ಸಾಧಿಸಲು ಕಷ್ಟವಾದ ಕೆಲಸ ಅಲ್ಲವೆ?
    • ನನ್ನನ್ನು ಆ ಆಸ್ಪತ್ರೆಯಲ್ಲಿ ಹೇಗೆ ನೋಡಿಕೊಂಡರು ಎಂಬುದನ್ನು ಪ್ರತ್ಯೇಕವಾಗಿ ಹೇಳಲೇಬೇಕಿಲ್ಲ. ನೀವೇ ಊಹಿಸಿ, ನನ್ನಂತಹ ರೋಗಿ ಸತ್ತರೆ ಅವರಿಗೇ ನಷ್ಟ. ಬೇಗ ಗುಣವಾದರೆ ಇನ್ನೂ ಹೆಚ್ಚು ನಷ್ಟ. ಈ ಎರಡೂ ಆಗದಂತೆ ಅತ್ಯಂತ ಜಾಗರೂಕತೆಯಿಂದ ನೋಡಿಕೊಂಡರು ಅನ್ನಿ.
    • "ನಿಮ್ಮ ತಲೆ! ನಿಮ್ಮ ದೇವರೂ ನಿಮ್ಮ ಮಟ್ಟದವನೇ ಅನ್ನಿ. ಪ್ರಾರ್ಥಿಸಿದರೆ ಮಾತ್ರವೇ ರೋಗವನ್ನು ಗುಣ ಮಾಡುವ ದೇವರಿಗೂ, ಲಂಚಕ್ಕೆ ಒಳ್ಳೆಯ ಔಷಧಿ ಕೊಡುವ ಸರಕಾರೀ ಡಾಕ್ಟರರಿಗೂ ಏನು ಸ್ವಾಮೀ ಭೇದ?"
    • ಅವಿದ್ಯಾವಂತರ ಮೌಢ್ಯ ಕ್ಷಮಾರ್ಹ-ಆದರೆ ವಿದ್ಯಾವಂತರ ಮೌಢ್ಯ?
    • ಉಲ್ಲಸಿತ ಮನಸ್ಸು, ಪ್ರಸನ್ನವಾದ ಮನಸ್ಸು, ತುಂಬು ಹೃದಯದ ನಗೆ ಉಳ್ಳವನ ಬಳಿ ಯಾವ ರೋಗವೂ ಬಾರದು. ಬಂದರೂ ಅವನಲ್ಲಿ ಎರಡು ದಿನ ಉಳಿಯಲಾರದು.
    • "ದೇವರನ್ನು ನಂಬಿದವರು  ಆಸ್ಪತ್ರೆಯ ಅಧಿಕಾರಿಗಳಿಗೆ, ಪೇದೆಗಳಿಗೆ ಲಂಚ ಏಕೆ ಸ್ವಾಮಿ ಕೊಡಬೇಕು?"
    • "ಏಕೆ? ಮುಖವನ್ನೇಕೆ ತೊಳೆಯಬೇಕು? ಹುಲಿ ಸಿಂಹ ಮುಂತಾದವು ಮುಖ ತೊಳೆಯುತ್ತವೆಯೋ?" ಎಂದು ಕೇಳಿದೆ. "ಇಲ್ಲ ಕತ್ತೆ ಎತ್ತುಗಳೂ ತೊಳೆಯುವುದಿಲ್ಲ" ಎಂದಳು.
    ಮುಂದಿನ ಶುಕ್ರವಾರ ದೇವರಿಲ್ಲದ ಗುಡಿ.
    ಈಗ ನನ್ನ ಮುಕ್ತಕ. ಧಾಟಿಗೆ ಒಂದು ಬಾರಿ - ಬೋರ್ಡಿನ,  ಮೇಲಿನ,  ಅಕ್ಷರ,  ಗಳಪೈಕಿ, ಹೀಗೆ ಬಿಡಿಸಿಕೊಂಡು ಓದಿ. 

    ಕಣ್ಣಿನ ಡಾಕ್ಟರಲ್ಲಿ.
    " ಬೋರ್ಡಿನ ಮೇಲಿನ ಅಕ್ಷರಗಳ ಪೈಕಿ 
    ಎಷ್ಟೋದಬಲ್ಲಿರಿ ರಾಯ್ರೆ?
    ಮೇಲಿಂದ ನೋಡಿರಿ" "ಸರಿ ಸರಿ ಗೊತ್ತಾಯ್ತು,
    ಆ ಬೋರ್ಡು ಎಲ್ಲಿದೆ ಡಾಕ್ಟ್ರೆ?"


    ಶುಕ್ರವಾರ, ಅಕ್ಟೋಬರ್ 26, 2012


    ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
    (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
    ಇವತ್ತಿನ ಪ್ರಜಾವಾಣಿಬ್ಲಾಗಿಲನು ತೆರೆದು... ಅಂಕಣದಲ್ಲಿ  ಈ ಬ್ಲಾಗನ್ನು ಪರಿಚಯಿಸುವ ಅರ್ಥಪೂರ್ಣವಾದ ಲೇಖನ ಬಂದಿದೆ. ಆ ಬಗ್ಗೆ 
    ಅಂಕಣಕಾರರಿಗೂ ಪತ್ರಿಕೆಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
    • "ಅದೆಲ್ಲ ಪ್ರಶ್ನೆ ಸಮಾಜಕ್ಕೆ ಸಂಬಂಧವಿಲ್ಲ. ತಲೆ ಇದ್ದರಲ್ಲವೆ ಅದರಲ್ಲಿ ಪ್ರಶ್ನೆಗಳೇಳುವುದು ? ದುಂಡು ಜಗತ್ತಿಗೆ ರುಂಡವಿಲ್ಲ, ಸ್ವಾಮೀ!"
    • ನೀತಿಯನ್ನು ಬಿಟ್ಟು ಬಾಳುವ ಪ್ರಜೆಗಳೇ ಹೆಚ್ಚಿರುವಾಗ ಹಳಿಯನ್ನು ಬಿಟ್ಟು ಓಡುವ ಸ್ವಾತಂತ್ರ್ಯ ರೈಲಿಗೆ ಮಾತ್ರ ಏಕೆ ಬೇಡ?
    • "ಹಾಗೂ ಅಲ್ಲ, ಹೀಗೂ ಅಲ್ಲ, ಅವರವರ ಸಂಸ್ಕೃತಿ ಅವರವರನ್ನು ಕಾಯಬೇಕಾಗಲಿ, ಅಪ್ಪ ಅಮ್ಮ ಕಾಯಲು ಆಗುತ್ತದೆಯೇ?"
    • ಸಂಸ್ಕೃತಿ ಎಂಬುದು ಮುಳ್ಳು ಬೇಲಿ. ಹೆಂಣಿನ ಶೀಲವನ್ನು ಕಾಯಲು ಅದೊಂದೇ ಸಾಕು.
    • ಸಾಲಂಕೃತ ಅಂದರೆ ಸಾಲವನ್ನು ಮಾಡಿ ಕನ್ನೆಗೆ ಮದುವೆ ಮಾಡಿ ಹೊರಸಾಗಿಸಿದರು.
    • ಕಾಲರಾಯ ನುಂಗಲಾರದ ದುಃಖ ಎಂಬುದಿದೆಯೇ, ಈ ಸೃಷ್ಟಿಯಲ್ಲಿ? ವೃದ್ಧಾಪ್ಯದಲ್ಲಿ ಯೌವನದ ಮಗನನ್ನು ಕಳೆದುಕೊಂಡು ಮರೆತವರಿದ್ದಾರೆ.
    *ಮುಂದಿನ ಬ್ಲಾಗ್ ಬರವಣಿಗೆ ಮುಂದಿನ ಶುಕ್ರವಾರ.
    ಈಗ ನನ್ನ ಮುಕ್ತಕ.

    ಹಲ್ಲಿನ ಡಾಕ್ಟರಲ್ಲಿ....
    "ಒಂದು ಹಲ್ಲನು ಕಿತ್ತು ಎರಡು ಹಲ್ಲಿನ ಫೀಜು 
    ನೀವು ಕೇಳುವುದು ಏತಕ್ಕೆ?"
    "ಈ ಹಲ್ಲು ಕಿತ್ತಾಗ ನೀ ಕೂಗಿಕೊಂಡಾಗ 
    ಓಡಿ ಹೋದನು ಒಬ್ಬ, ಅದಕೆ!"            
                                                         **********

    `

      ಬುಧವಾರ, ಅಕ್ಟೋಬರ್ 24, 2012

      ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
      (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
      • ಉಪದೇಶ ಕೊಡುವ ಧಾರಾಳತೆಗೆ ನಮ್ಮ ಜನತೆಯಲ್ಲಿ ಕೊರತೆಯೇ?  ಮಾಡು ಇಲ್ಲವೇ ಉಪದೇಶ ಮಾಡು ಎಂಬುದೇ  ನಮ್ಮ ತತ್ವ ಅಲ್ಲವೇ?
      • ಆದರೆ ತಲೆ ಮಾತ್ರವೇ ಮನುಷ್ಯನಲ್ಲವಲ್ಲಾ? ಹೃದಯವೆಂಬುದೂ ಒಂದಿರುತ್ತದೆ ಸ್ವಾಮಿ!
      • ಹೃದಯಕ್ಕೆ ತಲೆ ಇಲ್ಲ, ತಲೆಗೆ ಹೃದಯವಿಲ್ಲ, ಆದರೆ ಈ ಎರಡೂ ಮಾನವನಿಗಿರುತ್ತವೆ.
      • ಅಧಿಕಾರವೆಂದರೇನು? ಅದೊಂದು ದೇವನ ಹೆಂಡ. ಅದರ ಅಮಲಿನಲ್ಲಿ ಎಲ್ಲವನ್ನೂ ಮರೆಯುತ್ತಾರೆ.
      • ತಂದೆ ತಾಯಿಗಳು ಮಕ್ಕಳನ್ನು ಕೆಡಿಸುವುದಕ್ಕೆ ಎರಡು ಆಯುಧಗಳಿವೆ-ಒಂದು ಬೆತ್ತ, ಇನ್ನೊಂದು ಅತಿ ಪ್ರೀತಿ. ಈ ಎರಡನ್ನೂ ಸಮಯೋಚಿತವಾಗಿ ಉಪಯೋಗಿಸಿದರೆ ಮಕ್ಕಳು ಚೆನ್ನಾಗಿಯೇ ಆಗುತ್ತವೆ, ಒಳ್ಳೆಯ ಪ್ರಜೆಯಾಗಿ ಬಾಳುತ್ತವೆ ಕೂಡ.
      • "ನಾನು ದೇವರನ್ನು ನಂಬುವುದಿಲ್ಲ. ಆದರೆ ದೈವೀ ಪ್ರತೀಕಾರವೆಂಬುದಂತೂ ಇದ್ದೇ ಇದೆಯಲ್ಲ!"
      ಮುಕ್ತಕ.
      ಸುಭಾಷಿತ 
      ಅತಿಯಾದ ಬಳಕೆಯು ಬೆಲೆಯನು ಕಳೆವುದು 
      ಇದಕೊಂದು ಸಾಮತಿಯಿಹುದು.
      ಮಲಯ ಪರ್ವತದಲ್ಲಿ ಚಂದನ ವೃಕ್ಷವು 
      ಭಿಲ್ಲರ ಒಲೆಯುರಿಸುವುದು.
                                                              **********

        ಸೋಮವಾರ, ಅಕ್ಟೋಬರ್ 22, 2012


        ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
        (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
        • ಡಾಕ್ಟರ್ ಜಿ. ರಾಂಕ್ ಎಂಬ ಮಾನಸ ಶಾಸ್ತ್ರಜ್ಞ ಈ ಜಾತಿ ಪದ್ಧತಿಯಿಂದ ಮಾನವನ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳ ಒಂದು ಯಾದಿಯನ್ನೇ ಸಿದ್ಧಪಡಿಸಿದ್ದಾನೆ.
        • ಜಾತಿ ಒಂದು ಅಗ್ಗದ ಅಫೀಮು.
        • ತನ್ನ ಬಗ್ಗೆ ಏನನ್ನೂ ಹೇಳಿಕೊಳ್ಳಲು ಇಲ್ಲದವನು ತನ್ನ ಜಾತಿಯನ್ನು ಹೇಳಿಕೊಳ್ಳುತ್ತಾನೆ.
        • ಯಾವನೂ ತನ್ನ ಜಾತಿಗಾಗಿ ನಾಚಿಕೆ ಪಡಬೇಕಾಗಿಲ್ಲ. ಅಂತೆಯೇ ಯಾವನೂ ಹೆಮ್ಮೆಪಟ್ಟುಕೊಳ್ಳಬೇಕಿಲ್ಲ.ಅದಕ್ಕವನು ಜವಾಬ್ದಾರನಲ್ಲವಲ್ಲ?
        • ತಪ್ಪು ಮಾಡಿದವನು ಕ್ಷಮಾಪಣೆ ಬೇಡುವುದರಲ್ಲಿ ನಾಚಿಕೆ ಏಕೆ? ತಪ್ಪನ್ನೊಪ್ಪಿಕೊಂಡು ಕ್ಷಮಾಪಣೆ ಬೇಡುವುದು ಸುಸಂಸ್ಕೃತ ಮನುಷ್ಯನ ಮೊಟ್ಟ ಮೊದಲ ಲಕ್ಷಣ.
        • ಜಾತಿಗೆ ಬೆಲೆ ಇದೆ, ನೀತಿಗೆ ಬೆಲೆ ಇಲ್ಲ. ಹಣಕ್ಕೆ ಬೆಲೆ ಇದೆ, ಗುಣಕ್ಕೆ ಬೆಲೆ ಇಲ್ಲ. ಮೌಢ್ಯತೆಗೆ ಬೆಲೆ ಇದೆ, ವಿವೇಚನೆಗೆ ಬೆಲೆ ಇಲ್ಲ-ಇದು ನಮ್ಮ ಸಮಾಜ.
        • ಜೇಲು ಅಂದರೆ ನನಗೆ ತುಂಬಾ ಇಷ್ಟ. ಇಲ್ಲಿ ನೂರೆಂಟು ಜಾತಿಗಳ ಜಂಜಾಟವಿಲ್ಲ. ಮೇಲ್ಜಾತಿ, ಕೀಳ್ಜಾತಿ ಎಂಬ ಅಯೋಗ್ಯ ಮತ್ತು ದಡ್ಡ ಕಲ್ಪನೆಗಳಿಲ್ಲ. ಎಲ್ಲರೂ ಒಂದೇ ಜಾತಿ. ನೀವು ಹೊರಗಡೆ ಇನ್ನೂ ಕನಸು ಕಾಣುತ್ತಿರುವ ಜಾತ್ಯತೀತ ಸಮಾಜ ಇಲ್ಲಿ ಎಂದೋ ಹುಟ್ಟಿದೆ.
        ಶುಕ್ರವಾರದ ಮುಕ್ತಕದ ಒಗಟು: ಮೊದಲ ಮೂರು ಪ್ರಶ್ನೆಗಳಿಗೆ ಕೊನೆಯ ಸಾಲಿನಲ್ಲಿರುವ ಮೂರು ಶಬ್ದಗಳೇ ಕ್ರಮವಾಗಿ ಉತ್ತರ!
        ಇನ್ನು ಮುಂದಿನ ಮುಕ್ತಕ. ಧಾಟಿ ಹಿಡಿಯಲು  ಏನಯ್ಯ  ನೀಕೊಟ್ಟ  ಚಾಕಪ್ಪಿ ನೊಳಗೊಂದು  ನೊಣಬಿದ್ದು  ಸತ್ತಿದೆ  ಮಾಣಿ ಹೀಗೆ ಬಿಡಿಸಿ ಒಮ್ಮೆ ಓದಿಕೊಳ್ಳಿ.
        ಹೋಟೆಲಿನಲ್ಲಿ 
        "ಏನಯ್ಯ, ನೀ ಕೊಟ್ಟ ಚಾಕಪ್ಪಿನೊಳಗೊಂದು 
        ನೊಣ ಬಿದ್ದು ಸತ್ತಿದೆ ಮಾಣಿ"
        "ಚಾ ಒಳ್ಳೆ ಬಿಸಿಯುಂಟು ನೊಣ ಬಿದ್ದರದರಲ್ಲಿ 
        ಬದುಕಿರಲಾರದು ಕಾಣಿ!"
                                                                          ************

        ಶುಕ್ರವಾರ, ಅಕ್ಟೋಬರ್ 19, 2012


        ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
        (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
        • ನಿಮ್ಮ ಜಾತಿ ಯಾವುದು? ಎಂದು ಯಾರನ್ನೇ ಆಗಲಿ ಕೇಳುವುದು ಒಳ್ಳೆಯ ಅಭಿರುಚಿಯಲ್ಲ ಮಾತ್ರವಲ್ಲ, ಇದು ಶುದ್ಧ ಮತ್ತು ಸ್ಪಷ್ಟವಾದ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ. 
        • ಜಾತಿ ಎಂಬುದು ಮುಖ್ಯವಲ್ಲ. ಒಂದು ಜಾತಿಯಲ್ಲಿ ಹುಟ್ಟಲು ಯಾರೂ ದೊಡ್ಡದಾಗಿ ತಪಸ್ಸು ಮಾಡಿ ಹುಟ್ಟಿಲ್ಲ. ಹುಟ್ಟು ಎಂಬುದೇ ಕೇವಲ           ಆಕಸ್ಮಿಕ.
        • ಜಾತಿ ಎಂದರೇನು? ಅದು ಎಂದೋ ನಿಂತ ಕೊಳೆತ ನೀರಾಗಿದೆ. ದುರ್ನಾತಕ್ಕೆ ಎಡೆ ಕೊಟ್ಟಿದೆ. 
        • ಮಾನಸಿಕ ಅನಾರೋಗ್ಯಕ್ಕೆ ಜಾತಿಯೇ ತವರೂರು.
        • ಮಹಾಮೇಧಾವಿ  ಬರ್ಟ್ರೆಂಡ್ ರಸೆಲ್ ಜಾತಿಯ ಬಗ್ಗೆ ಏನು ಹೇಳಿದ್ದಾನೆ? ನನಗಾವ ಜಾತಿಯೂ ಸಮ್ಮತವಲ್ಲ, ಎಲ್ಲ ಜಾತಿಗಳು ಸಾಯಲಿ ಎಂದು ಆಶಿಸುತ್ತೇನೆ ಎಂದು ಒಂದೆಡೆ ನುಡಿದಿದ್ದಾನೆ.
        • ಜಾತಿಗಳಲ್ಲಿ ನಂಬಿಕೆಯುಳ್ಳವನು ಧರ್ಮದ ಹೆಸರಿನಲ್ಲಿ ಕೆಡಕು ಮಾಡುತ್ತಾನೆ, ಧರ್ಮದ ಗದ್ದುಗೆಯ ಮೇಲೆ ಕುಳಿತು ಮಾನವ ಧರ್ಮವನ್ನೇ  ಮರೆಯುತ್ತಾನೆ. 
        • ತಾವು ಉತ್ತಮ ಜಾತಿ ಎಂದು ತಿಳಿದ ಅನೇಕರು ತಮ್ಮ ಜಾತಿಯನ್ನು ಕಟುಕನು ತನ್ನ ಚಾಕುವನ್ನು ಉಪಯೋಗಿಸುವಂತೆ ಉಪಯೋಗಿಸುತ್ತಾರೆ.
        ಇನ್ನು ಒಂದು ಮುಕ್ತಕ.
        ಒಗಟು 
        ಸಾವಿರ ಕಣ್ಣುಗಳಾರಿಗೆ? ಊಟದ 
        ಕೊನೆಯಲಿ ಬಡಿಸುವುದೇನು?
        ಕಡುಪಾಪಿಯಾದಗೆ ಸ್ವರ್ಗವು ಸಿಗುವುದೆ?
        ಇಂದ್ರಗೆ ಮಜ್ಜಿಗೆ ಸಿಗದು!
                                                                 ************

        ಬುಧವಾರ, ಅಕ್ಟೋಬರ್ 17, 2012


        ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
        (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
        • ಕುಡಿತವನ್ನು ಕೊಂಡಾಗ ಕಿಸೆಯಲ್ಲಿನ ಕಾಸು ಹೋಗುತ್ತದೆ. ಬೆಳಗಾದ ನಂತರ ಕುಡಿತದ ಅಮಲು ಹೋಗುತ್ತದೆ. ಅಷ್ಟಿಷ್ಟು ತಿಂದನಂತರ ಅದರ ವಾಸನೆಯೂ ಹೋಗುತ್ತದೆ. ಆದರೆ ಕುಡಿತ ಮುಖದಲ್ಲಿ ಮಾಡುವ ಗುರುತು?   `ಇವನು ಕುಡುಕ' ಎಂದು ಬೋರ್ಡು ಬರೆದು ಹಣೆಯ ಮೇಲೆ ಹಚ್ಚುತ್ತದೆ.
        • ಕೆಲವರು ಅನುಗಾಲವೂ ತಮ್ಮ ಭವಿಷ್ಯದ ಬಗ್ಗೆಯೇ ಯೋಚಿಸುತ್ತ ಕುಳಿತು ತಮ್ಮ ಇರುವಿಕೆಯನ್ನು ಹಾಳು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಸದಾ ತಮ್ಮ ಗತಜೀವನವನ್ನು ನೆನೆಯುತ್ತ ಇಂದು ಎಂಬುದನ್ನೆ ಮರೆಯುತ್ತಾರೆ. ಅಂತೂ ವರ್ತಮಾನ ಕಾಲದಲ್ಲಿ ಇಬ್ಬರೂ ಇಲ್ಲ. ಇಂತಹರು ಬುದ್ಧಿವಂತ ಪಶುಗಳು.
        • ನಿನ್ನೆ ಎಂಬುದು ಹೋಯ್ತು, ನಾಳೆ ಬರುವುದು ಅನುಮಾನ, ಇಂದು ಎಂಬುದೊಂದೇ ಸತ್ಯ. ನಾನೂ ಉಮರನ ವಿಚಾರ ಸರಣಿಯವನು.
        • "ನಿಮ್ಮ ಜಾತಿ ಯಾವುದು ಎಂದು ಕೇಳಬಹುದೇ, ಮಿಸ್ಟರ್?"   "ಥುತ್! ಅಯೋಗ್ಯರ ತಲೆಯಲ್ಲಿ ಅಯೋಗ್ಯ ವಿಚಾರಗಳೇ ಬರುತ್ತದೆ. ನಿನ್ನಂತಹ ಕ್ಷುಲ್ಲಕ ಮನುಷ್ಯ ನನ್ನ ಆತ್ಮ ಚರಿತ್ರೆ ಬರೆದುಕೊಳ್ಳಲೂ ಯೋಗ್ಯನಲ್ಲ. ಹೋಗು, ಹಾಳಾಗಿ ಹೋಗು"
        • ಹುಟ್ಟಿದ ಜಾತಿಗೂ ಬದುಕಿ ಬಾಳುತ್ತಿರುವ ಜಾತಿಗೂ ಯಾವ್ಯಾವ ಸಂಬಂಧವೂ ಇಲ್ಲ.
        • ಮಾನವ ಜಾತಿ ಎಂದು ಹೇಳಿಕೊಳ್ಳುವ ಯೋಗ್ಯತೆ ಇಲ್ಲದವರೂ ಇದ್ದಾರೆ. ಪ್ರಾಯಶಃ ಅವರೇ ಹೆಚ್ಚಿದ್ದಾರೆ.
        • ಈ ಜಾತಿಯಿಂದ ಯಾರಿಗಾವ ಉಪಯೋಗವಿದೆ. ದಡ್ಡ ಜನತೆಯನ್ನು ಸ್ವಾರ್ಥಕ್ಕಾಗಿ  ಉಪಯೋಗಿಸಿಕೊಂಡು ಮತಗಳನ್ನು ನುಂಗಿ ದೊಡ್ದವರೆನಿಸಿಕೊಳ್ಳುವ ಬೆಂಕಿ ಕೋಳಿಗಳಾದ ರಾಜಕಾರಿಣಿಗಳಿಗೆ ಚುನಾವಣೆ  ಸಮಯದಲ್ಲಿ ಮಾತ್ರ ಇದರ ಉಪಯೋಗ.
        ಇನ್ನು ನನ್ನದೊಂದು ಮುಕ್ತಕ.

        ಮೋಸ 
        " ನಿನ್ನನೆ ನಂಬಿದ ಜನರಿಗೆ ಮೋಸವ 
        ಏಕೆ ಮಾಡುವುದಯ್ಯ  ನೀನು?"
        " ನನ್ನನು ನಂಬದ ಜನರಿಗೆ ಮೋಸವ 
        ಹೇಗೆ ಮಾಡುವುದಯ್ಯ ನಾನು?"
                                                                  **********

        ಸೋಮವಾರ, ಅಕ್ಟೋಬರ್ 15, 2012


        ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
        (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
        • ಸುಳ್ಳನ್ನು ನಂಬಿದಷ್ಟು ಸುಲಭವಾಗಿ ಯಾವ ಸಮಾಜವೂ ಸತ್ಯವನ್ನು ನಂಬಲು ಸಾಧ್ಯವಿಲ್ಲ.
        • ಇದು ಆತ್ಮಚರಿತ್ರೆ. ಜಗತ್ತಿನ ಮುಂದು ತನ್ನ ಆತ್ಮವನ್ನು ಬೆತ್ತಲೆಯಾಗಿ ನಿಲ್ಲಿಸಬೇಕು.ಅದಕ್ಕೆ ಬೇಕಾದುದು ಒಂದೇ ಒಂದು-ಬೌದ್ಧಿಕ ಪ್ರಾಮಾಣಿಕತೆ. ಇದು ಇಲ್ಲದವನು ಆತ್ಮಚರಿತ್ರೆ ಬರೆಯುವ ಉದ್ಧಟತನಕ್ಕೆ ಎಂದೂ ಕೈಹಾಕಬಾರದು.
        • ಜೀವನದ ಬರೀ ಗೆಲುವುಗಳನ್ನಷ್ಟೇ ಲಿಸ್ಟ್ ಮಾಡಿ ಸಾಲಾಗಿ ಪೋಣಿಸಿ ಬರೆದರೆ ಅದು ಆತ್ಮಚರಿತ್ರೆ ಆಗುವುದಿಲ್ಲ. ಆತ್ಮಪ್ರತಿಷ್ಠೆ ಚರಿತ್ರೆ ಆಗುತ್ತದದು.
        • ಗಾಂಧೀಜಿಯವರನ್ನೇ ಪೂರ್ತಿಯಾಗಿ ಮರೆತಿರುವ ಭಾರತದಲ್ಲಿ ಅವರು ಹೇಳಿರುವ ಒಂದು ಮಾತನ್ನು ಮರೆಯುವುದರಲ್ಲಿ ಏನೂ ಆಶ್ಚರ್ಯವಿಲ್ಲ. 
        • ನಮ್ಮ ದೇಶದ ಚರಿತ್ರೆಯಲ್ಲಿ ಒಬ್ಬನೇ ಗಾಂಧಿ, ಒಬ್ಬರೇ ಲಾಲ್ ಬಹದ್ದೂರ್ ಶಾಸ್ತ್ರಿ.  ಅನಂತರದವರೆಲ್ಲ ಎಲೆಕ್ಷನ್ ಗಾಂಧಿಗಳು, ಬೈ ಎಲೆಕ್ಷನ್ ಶಾಸ್ತ್ರಿಗಳು.
        • ಪ್ರಾಮಾಣಿಕ ಕಳ್ಳ, ಸತ್ಯಸಂಧನಾದ ರಾಜಕೀಯ  ಪುಢಾರಿ, ಸತಿ ಸೂಳೆ! ಹೀಗೂ ಉಂಟೆ? ಯಾಕಿರಬಾರದು?
        ಇನ್ನು ಒಂದು ಮುಕ್ತಕ. 
        ನಾದ 
        `ನಾನೆಷ್ಟು ಚೆನ್ನಾಗಿ ಹಾಡಿದೆ ಗೊತ್ತೇನು? 
        ನಾದ ತುಂಬಿತು ಸಭೆಯೊಳಗೆ'
        `ಇರಬೇಕು, ಅದರಿಂದ ಜಾಗವೆ ಸಾಲದೆ 
        ಜನ ಹೋಗುತಿದ್ದರು ಹೊರಗೆ!' 
                                                                  ***********


          ಶುಕ್ರವಾರ, ಅಕ್ಟೋಬರ್ 12, 2012


          ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
          (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ : 9845264304)
          • ನಗೆ ಯಾರಪ್ಪನ ಆಸ್ತಿಯೂ ಅಲ್ಲ. ಅದನ್ನಾವ ಲಕ್ಷ್ಮೀಪುತ್ರನೂ ಗುತ್ತಿಗೆ ಹಿಡಿದಿಲ್ಲ.
          • ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿರುವವರಲ್ಲಿ ಆಳುವವರೇ  ಹೆಚ್ಚು.
          •  ಸುಖ ಪಡುವುದರಲ್ಲಿ ಅಷ್ಟು ಸುಖವಿಲ್ಲ. ಕಷ್ಟದಲ್ಲಿರುವಾಗ ಆಗುವ ಸುಖದ ನೆನಪು ಹೆಚ್ಚಿನ ಸುಖ.
          • ಇನ್ನೊಬ್ಬರ ಮನಸ್ಸನ್ನು ಓದಲು ಬರುವಂತಿದ್ದರೆ ಈ ಜಗತ್ತಿನ ಕಥೆಯೇ ಬೇರೆಯಾಗುತ್ತಿತ್ತು ಪ್ರಾಯಶಃ.
          • ಜೇಲಿನಲ್ಲಿರುವವರೆಲ್ಲರೂ ಕಳ್ಳರು, ಆದರೆ ಹೊರಕ್ಕಿರುವವರೆಲ್ಲರೂ ಸುಸಂಪನ್ನರೆ? ಗರ್ಭಿಣಿಯಾದ ವಿಧವೆ ಮಾತ್ರವೇ ವ್ಯಭಿಚಾರಿಣಿ ಈ ಧೃತರಾಷ್ಟ್ರ ಸಮಾಜದ ಗಜುಗ ಕಂಣಲ್ಲಿ.
          • ವ್ಯಕ್ತಿಗೆ ವ್ಯಕ್ತಿ ನಮಸ್ಕಾರ  ಅನ್ನುವುದು ಒಂದು ಸುಸಂಸ್ಕೃತಿಯ ಕುರುಹು. ಸ್ಥಾನ, ಮಾನ ಇವೆಲ್ಲವೂ ಸಾಮಾನ್ಯ ದಡ್ಡರಿಗಷ್ಟೇ.
          • ದೇವನ ಸಹಾಯವನ್ನೂ ಎಡಕಾಲಿನಿಂದ ಒದೆಯುವ ಮನೋದಾರ್ಡ್ಯ (ದೊಡ್ಡ ಡ ಎಂದು ಓದಿಕೊಳ್ಳಿ) ಉಳ್ಳವನೇ ನನ್ನ ದೃಷ್ಟಿಯಲ್ಲಿ ದೇವರು.
          ಇಂದಿಗಿಷ್ಟು. ಇನ್ನು ನನ್ನದೊಂದು ಮುಕ್ತಕ.
          ನೀತಿ 
          ಅತಿಯಾಗಿ ಉರಿದರೆ ಅತಿ ಬೇಗ ಆರುವೆ 
          ಮದ್ಯಸಾರದ ಉರಿಯ ರೀತಿ.
          ಮಿತಿಯಿಂದ ಇದ್ದರೆ ಬಹುಕಾಲ ಬಾಳುವೆ 
          ಹರಳೆಣ್ಣೆ ದೀಪದ ನೀತಿ.

          ಶುಕ್ರವಾರ, ಅಕ್ಟೋಬರ್ 5, 2012

          ಬೀchi ಯವರ `ನಂಬರ್ ಐವತ್ತೈದು' ಪುಸ್ತಕದಿಂದ.......
          (ಪ್ರ: ಬೀchi ಪ್ರಕಾಶನ , 1743, `ಸಿ' ಬ್ಲಾಕ್ , ಸಹಕಾರ ನಗರ, ಬೆಂಗಳೂರು-560092.ದೂರವಾಣಿ :9845264304)
          • ಗಂಟೆ ಆರೋ, ಒಂಬತ್ತೋ, ಹನ್ನೊಂದೋ ಆಗಿರಬೇಕು. ಪಿಂಚಿನಿ  ಪುರುಷನಿಗೆ ಈ ಮೂರೂ ಒಂದೇ ತಾನೆ?  ಬೇಗ ಎದ್ದರೆ ಲಾಭವಿಲ್ಲ, ತಡವಾಗಿ ಎದ್ದರೆ ನಷ್ಟವಿಲ್ಲ.
          • ಟೆಲಿಫೋನು ಒಂದು ದುಬಾರಿ ಶತ್ರು. ನಮಗೆ ಯಾರು ಬೇಕೋ ಅವರು ಸಿಕ್ಕುವುದಿಲ್ಲ. ಯಾರು ಬಹಳ ಬೇಡವೋ ಅವರ ಕೈಗೆ ನಾವು ಸಿಕ್ಕಿಬೀಳುತ್ತೇವೆ.
          • ಟೆಲಿಫೋನು ಸುಮ್ಮನಾಯಿತೆಂದು ಸಂತೋಷಪಡುವವನು ದಡ್ಡ. ಅದು ಸುಮ್ಮನಾಗುವುದು ಮತ್ತೆ ಬಾರಿಸಲಿಕ್ಕೇ.
          • ಯಾರಾದರೂ ನಾವಿಲ್ಲದಾಗ ಮನೆಗೆ ಬಂದು, ಬಂದೊಡನೆ ಅವರನ್ನು ಕಾಣಲು ಹೇಳಿ ಹೋದರೆ ಒಂದೇ ಅರ್ಥ ಕೆಲಸ ಅವರದು-ನಮ್ಮದಲ್ಲ, ನಮಗೆ ಹಣ ಕೊಡುವವರು ಉಪಕಾರ ಮಾಡುವವರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆಯೇ?
          • ಡಿಗ್ರಿ ಬೇರೆ. ನಡತೆ ಬೇರೆ. ಇದಕ್ಕೂ ಅವಕ್ಕೂ ಸಂಬಂಧವೇ ಇಲ್ಲ.
          • "ಹೌದು, ಸರಕಾರಿ ಕೆಲಸದಲ್ಲಿ ಇವೆಲ್ಲ ಶ್ರಾದ್ಧ ನಿಯಮಗಳಿದ್ದಂತೆ. ಮಾಡದಿದ್ದರೆ ತಪ್ಪು; ಮಾಡಿದರೆ ಪ್ರಯೋಜನವಿಲ್ಲ"
          ಇಂದಿಗಿಷ್ಟು. ಇನ್ನು ಸೋಮವಾರ. ಈಗ ನನ್ನ ಒಂದು ಮುಕ್ತಕ.
          ಹದ್ದಿಗೆ 
          ಆಕಾಶದೆತ್ತರ ಹಾರಾಡುತಿದ್ದರು 
          ನೀನರಸುವುದೊಂದು ಹೆಣವ.
          ಹದ್ದೆ ನಿನ್ನಂತೆಯೆ ಕೆಲರು ಮೇಲೇರುವ 
          ರರಸಲು ಪರರವಗುಣವ.
                                                                    **********

          ಬುಧವಾರ, ಅಕ್ಟೋಬರ್ 3, 2012

          ಬೀchi ಯವರ `ಆಟೋ' ಕಾದಂಬರಿಯಿಂದ.....
          (ಪ್ರ:ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020)

          • "ಬಳ್ಳಾರಿಯ ಬ್ರಾಹ್ಮಣರು ಬಾಳೆಯ ಎಲೆಯಲ್ಲಿ ಉಂಡಂತೆ" ಎಂದೊಂದು ಮಾತು ಚಲಾವಣೆಯಲ್ಲಿದೆ ಆ ಭಾಗದಲ್ಲಿ. ನಾಳೆಗೆ ಕೆಟ್ಟು ಹೋಗಬಹುದಾದ್ದನ್ನು ಅಂದರೆ ಸಾಕಷ್ಟು ಬಾಡಿದ ಎಲೆಯನ್ನೇ, ಇಂದು ಉಪಯೋಗಿಸುವುದು. ನಾಳೆಯೂ ಮತ್ತೆ ಇದೆ ಕತೆಯೇ! ಅಂತೂ ಒಳ್ಳೆಯ ಎಲೆಯಲ್ಲಿ ಉಂಣುವುದು ಇವರ ಹಣೆಯಲ್ಲಿಯೇ ಇಲ್ಲ. ನಾಳೆಗೆ ಕೆಡುವ ಮತ್ತು ಇಂದು ಬಾಡಿದ ಎಲೆ ತಪ್ಪಿದರಲ್ಲವೆ, ಆ ಪ್ರಾಣಿ ಎಂದಾದರೂ ಒಳ್ಳೆಯ ಹೊಚ್ಚ ಹಸಿರು ಎಲೆಯನ್ನು ಹಾಸಿ ಉಂಣಬೇಕು?
          • ಓರ್ವ ಜಾಣನ ಮುಖಕ್ಕೆ ಆರತಿ ಎತ್ತಲು ನೂರೆಂಟು ಬಡಪಾಯಿ ಬಕರಾಗಳು ಗುಂಪು ಕಟ್ಟಬೇಕು.
          • ಜೀವನದಲ್ಲಿ ಆಶಾಭಂಗವನ್ನು ತಪ್ಪಿಸಿಕೊಳ್ಳಲು ಒಂದೇ ಉಪಾಯ. ಯಾವುದನ್ನೂ ಆಶಿಸಲೇಬಾರದು?
          • ಲೋಕದ ರೀತಿಯೇ ಹೀಗೆ-ಕಾಲಿನಿಂದ ಒದೆಯುವವನನ್ನು ಕಂಡು ಕೈ ಮುಗಿಯುತ್ತದೆ, ಕೈ ಮುಗಿಯುವವನ ತಲೆಯ ಮೇಲೆ ಕಾಲಿಡುತ್ತಾ  ನಡೆಯುತ್ತದೆ.
          ಇಲ್ಲಿಗೆ `ಆಟೋ'ದಿಂದ ಆಯ್ದದ್ದು ಆಯಿತು. ಇನ್ನು ಶುಕ್ರವಾರ. ಈಗ ನನ್ನದೊಂದು ಮುಕ್ತಕ.
          ಸುಭಾಷಿತ 
          ಅಕ್ಷರಗಳು ಸಮ ಸಮನಾಗಿ ಇರಬೇಕು 
          ಉರುಟು ದೃಢತೆ ಬೇಕು ಮತ್ತೆ.
          ಒಂದಕೊಂದಕೆ ಅವು ಮುಟ್ಟದಂತಿರಬೇಕು 
          ತರುಣಿಯ ಕುಚಯುಗ್ಮದಂತೆ!
                                                                 **********

          ಸೋಮವಾರ, ಅಕ್ಟೋಬರ್ 1, 2012

          ಬೀchi ಯವರ `ಆಟೋ' ಕಾದಂಬರಿಯಿಂದ.....
          (ಪ್ರ:ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020)
          • ಕಂಣೀರು  ಸುರಿಸುವುದೊಂದೇ ಹೆಂಣಿನ ಕೆಲಸವಾಗಿದ್ದರೆ ಎಲ್ಲ ಹೆಣ್ಣುಗಳೂ ಬರೀ ಅದನ್ನೇ ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನೂ ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿಬಿಡುತ್ತಿದ್ದವು.
          • ಹೊಟ್ಟೆಯ ಹಸಿವು ಬಾಳಿನ ಯಾವ ದುಃಖಕ್ಕೂಸೊಪ್ಪು  ಹಾಕುವುದಿಲ್ಲ.
          • "ನಿನ್ನ ಕಷ್ಟ, ನಿನ್ನ ಸುಖ ನಿನ್ನವು. ನನಗೆ ಕೊಡಬೇಕಾದುದನ್ನು ಮೊದಲು ಕೊಡು." ಎನ್ನುತ್ತದೆ ಹೊಟ್ಟೆ, ಟ್ಯಾಕ್ಸ್ ಇನ್ಸ್ ಪೆಕ್ಟರನಂತೆ. ಕೊಡಬೇಕು ಅಹುದು. ಆದರೆ ಎಲ್ಲಿಂದ? ಅದು ಹೊಟ್ಟೆಗೆ ಸಂಬಂಧಿಸದ ಪ್ರಶ್ನೆ.
          • ಎಲ್ಲಿಂದ ತಂದು ಹಾಕಿದರೂ ಅದು ತಿನ್ನುತ್ತದೆ. ಅದಕ್ಕೆ ನಿಯಮ, ನಿಯತ್ತುಗಳ ಕಾಟ ಒಂದೂ ಇಲ್ಲ. ಕಳ್ಳನ ಹೊಟ್ಟೆ ಅವನ ಅನ್ನ ಬೇಡ ಎನ್ನುವುದಿಲ್ಲವಲ್ಲ? ಬೇಡ ಎನ್ನದಿರುವುದಷ್ಟೇ ಅಲ್ಲ, ಅವನನ್ನು ಕಳ್ಳತನಕ್ಕೆ ಹಚ್ಚುವುದೇ ಆ ಹೊಟ್ಟೆ. ಅದಕ್ಕೇನು? ಅವನು ಜೇಲಿನಲ್ಲಿದ್ದರೂ ಅಲ್ಲಿಯೂ ಅದನ್ನು ಯಾರೋ ತುಂಬುತ್ತಾರೆ. ಅಂತೂ ತುಂಬುತ್ತಿರಬೇಕು ಅದನ್ನು ಆಗಾಗ್ಗೆ.
          • ತಂದೆ ಒಂದು ತಪ್ಪು ಮಾಡುತ್ತಾನೆ, ಮಗನು ಅದರಿಂದ ಸಹಜವಾಗಿಯೇ ಪಾಠ ಕಲಿಯುತ್ತಾನೆ. ತತ್ಫಲವಾಗಿ ಆ ತಪ್ಪನ್ನು ಬಿಟ್ಟು ಬೇರೊಂದು ಹೊಸತನ್ನು ಇವನು ಮಾಡುತ್ತಾನೆ!
          • ಆದರ್ಶವು ತಲೆಯನ್ನೊಯ್ದು ಆಕಾಶದಲ್ಲಿಡುತ್ತದೆ. ಬಾಳು ಕಾಲನ್ನು ನೆಲಕ್ಕೆ ತಂದು ನಿಲ್ಲಿಸುತ್ತದೆ.
          • ನಾಳೆಗೆ ಅಂಜುವ ಹೇಡಿಯೊಬ್ಬನು ಬೇಡವೆಂದರೆ ಬೆಳಗಾಗದೆ ಇರಲು ಆಗುತ್ತೆಯೇ?
          ಇಂದಿಗೆ ಇಷ್ಟು. ಇನ್ನು ಬುಧವಾರ. ಈಗ ನನ್ನದೊಂದು ಮುಕ್ತಕ.
          ಧಾಟಿ ತಿಳಿಯಲು, ದಪ್ಪಗಾ-ಜಿನಒಂದು -ಕನ್ನಡಕ-ಕಳೆದಿದೆ-ಸಿಕ್ಕಿದ-ವರುದಯ-ಮಾಡಿ, ಪತ್ರಿಕೆ-ಯಲಿದಪ್ಪ-ದಪ್ಪಅ-ಕ್ಷರಗಳ-ಪ್ರಕಟಣೆ-ಯೊಂದನು-ನೀಡಿ  ಹೀಗೆ ಪದಚ್ಛೆeದ ಮಾಡಿಕೊಂಡು ಒಮ್ಮೆ  ಓದಿ. 
          ಪ್ರಕಟಣೆ 
          ದಪ್ಪ ಗಾಜಿನ ಒಂದು ಕನ್ನಡಕ ಕಳೆದಿದೆ 
          ಸಿಕ್ಕಿದವರು ದಯಮಾಡಿ 
          ಪತ್ರಿಕೆಯಲಿ ದಪ್ಪದಪ್ಪ ಅಕ್ಷರಗಳ 
          ಪ್ರಕಟಣೆಯೊಂದನು ನೀಡಿ.  
                                                             *****

          ಶುಕ್ರವಾರ, ಸೆಪ್ಟೆಂಬರ್ 28, 2012

          ಇನ್ನು ಬೀchi ಯವರ `ಆಟೋ' ಕಾದಂಬರಿಯಿಂದ ( ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ-580020. ಫೋ-2367676. Email:sahithyaprakashana@yahoo.co.in)  ಆಯ್ದ ವಿಚಾರಗಳು.
          • "ಬಾಯಿ ಮುಚ್ಚೋ ಬದ್ಮಾಷ್! ಗಂಡು ಖರಾಬ್ ಆದ್ರೆ ದಿಲ್ದಾರ್ ಆದ್ಮಿ ಹೆಣ್ಣು ದಿಲ್ದಾರ್ ಆದ್ರೆ ಖರಾಬ್ ಅಮ್ತೀಯಾ? ಸೈತಾನ್"
          • ಮಲೇರಿಯಾ ರೋಗವೆಂದು ತಿಳಿದು ಔಷಧ ಕೊಟ್ಟು ಅವನನ್ನು ಕೊಂದ ಡಾಕ್ಟರು, ಅವನು ಸತ್ತ ತಕ್ಷಣವೇ ಅದು `ಟೈಫಾಡ್ ' ಎಂದು ಕರೆಕ್ಟ್ ಆಗಿ `ಡಯಾಗ್ನೈಜ್' ಮಾಡಿದ್ದರು.
          • ಅಳವಂಡಿ ಸಿಲ್ಕು ಫಾರ್ಮಿಗೆ ಗಾಡಿ ಹೊಡೆದು, ತನ್ನೆತ್ತಿನೊಡನೆ ಮಳೆ ಬಿಸಿಲಿನಲ್ಲಿ ಮೈಮುರಿದು ದುಡಿಯುವವನಿಗೆ ಜಾತಿ ಗೀತಿಗಳಿಂದ ಆಗಬೇಕಾದುದೇನಿದೆ? ಅವನೇನು ಕಾರ್ಪೋರೇಶನ್ ಕೌನ್ಸಿಲರ್ ಆಗಬೇಕೆ?
          • ಜಾತಿ ಜಗಳಗಳೆಲ್ಲವೂ ಬಹು ಬುದ್ಧಿಯುಳ್ಳವನಿಗೆ. 
          • ಮಕ್ಕಳಾಗಲಿಲ್ಲ ಎಂಬುದಕ್ಕೆ ಯಾವಾಗಲೂ ಒಂದೇ ಅರ್ಥ ಹೆಂಣು  ಬಂಜೆ, ಇದಕ್ಕೆ ಪರಿಹಾರ? ಗಂಡಿಗೆ ಇನ್ನೊಂದು ಹೆಂಣು  ತರತಕ್ಕದ್ದು. ಆ ಹೆಂಣಿಗೇ ಇನ್ನೊಂದು ಗಂಡನ್ನು.....ಛೆ! ಉಂಟೆ?
          • ಪೈಸಾ ಇಲ್ಲದಿದ್ರೆ ಯಾರು ಕೇಳ್ತವ್ರೆ ? ಈ ಹರಾಮ್ ಧುನಿಯಾದಲ್ಲಿ ಪೈಸಾನೆ ಎಲ್ಲಾ, ಪೈಸಾನೆ ಅಲ್ಲಾ!
          • ಸಾಕಷ್ಟು ದಡ್ಡತನವು ಜನತೆಗೆ ಸಹಜವಾಗಿಯೆ ಇರುತ್ತದೆ. ವಂಚಕರಿಗೆ ಸ್ವಲ್ಪ ಬುದ್ಧಿ ಇದ್ದರೇ ಸಾಕೇ ಸಾಕು, ಇವನ ಕೆಲಸವೂ ಸುಲಲಿತವಾಗಿ ಆಗಿಹೋಗುತ್ತದೆ.
          • ಒಂದು ಬಾರಿ ಮೋಸ ಮಾಡಿದ ಮೇಲೆ ಎರಡನೆಯ ಸಲ ಸುಲಭ. ಅನುಭವವು ಎಲ್ಲಿಯಾದರೂ, ಎಂದಾದರೂ ವ್ಯರ್ಥವಾದುದುಂಟೆ?
          ಇಂದಿಗಿಷ್ಟು. ಇನ್ನು ಸೋಮವಾರ.
          ರಜೆಯಲ್ಲಿ ಕನ್ನಡದ ಪುಸ್ತಕ, ಪತ್ರಿಕೆ, ಮ್ಯಾಗಜೀನ್, ಬ್ಲಾಗ್ ಏನಾದರೂ ಓದಿ. 
          Enjoy week end. Enjoy life!
          ಈಗ ನನ್ನದೊಂದು ಮುಕ್ತಕ.
          ಮಗಳು 
          `ಸಿನೆಮಾಕ್ಕೆ ಬಾರೆಂದು ನಾಲ್ಕಾರು ಹುಡುಗರು 
          ಕರೆಯುತಿದ್ದರು ನಿಮ್ಮ ಮಗಳ.'
          `ಹೋದಳೇನಾಕೆಯು?' `ಇಲ್ಲ'  `ಆ ಹುಡುಗಿಯು 
          ಖಂಡಿತ ನನ್ನ ಮಗಳಲ್ಲ!'
                                                               *****


            


          ಬುಧವಾರ, ಸೆಪ್ಟೆಂಬರ್ 26, 2012


          • ತಂದೆ ಬರೀ ತಂದೆ ಮಾತ್ರ. ತಾಯಿ ಮಕ್ಕಳಿಗೆ ತಾಯಿಯೂ ಹೌದು ತಂದೆಯೂ ಹೌದು. ಬರೀ ಅಷ್ಟೇ ಅಲ್ಲ, ಗುರುವೂ ಹೌದು.
          • ಹೆಣ್ಣನ್ನು ಪ್ರಕೃತಿ  ಮನಃಪೂರ್ವಕವಾಗಿ  ಸೃಷ್ಟಿಸಿತು, ಶ್ರದ್ಧೆಯಿಂದ, ಆಸಕ್ತಿಯಿಂದ ಕಟ್ಟಕ್ಕರತೆಯಿಂದ ಸೃಷ್ಟಿಸಿತು. ಈ  ಮಾತನ್ನು ಹೇಳುವವರಾರು? ಬರೀ ನಾನಲ್ಲ, ವೆಂಡಲ್ ಹೋಮ್ಸ್ ಹೇಳಿದ್ದಾನೆ.
          • ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಒಂದೇ ಒಂದು ಮಾರ್ಗವಿದೆ ಮಾಧೂ! ಅದೇನು ಗೊತ್ತೆ? ಮೊದಲು ಹೆಣ್ಣನ್ನು ಪ್ರೀತಿಸು. ಅನಂತರ ಅದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯೇ ಇಲ್ಲ. ಎಂತಹ ಒಳ್ಳೆಯ ಒಳದಾರಿ ಇದು?
          • ಹೆಣ್ಣು ಎಂದೂ ತಪ್ಪು ಯೋಚನೆ ಮಾಡುವುದಿಲ್ಲ. ಏಕೆ? ಅದು ಯೋಚನೆಯನ್ನೇ  ಮಾಡುವುದಿಲ್ಲವಲ್ಲಾ ? ಇದು ಅವಹೇಳನ ಮಾಡುವ ಮಾತಲ್ಲ. ಹೆಣ್ಣು ಯೋಚನೆ ಮಾಡುವುದಿಲ್ಲ. ಮಾಡಬೇಕಾಗಿಯೂ ಇಲ್ಲ. ಅದಕ್ಕೆ ಪ್ರಕೃತಿಯ ಅಂತರ್ಬೋಧೆ ಎಂಬುದಿದೆ. ಅದನ್ನೇ ನಾವು ಇಂಗ್ಲಿಷ್ನಲ್ಲಿ ಸಿಕ್ಸ್ತ್ ಸೆನ್ಸ್  ಎಂದು ಕರೆಯುತ್ತೇವೆ. 
          • ಕೆಲ ಹೆಣ್ಣುಗಳಿಗೆ  ಹಲ ಗಂಡುಗಳಿಗಿಂತಲೂ ಬುದ್ಧಿ ಕಡಿಮೆ ಇರಬಹುದು. ಆದರೆ ಹೆಣ್ಣಿಗೆ ಹೆಚ್ಚಿನ ವಿವೇಕ ಇದೆ. ವಿವೇಚನೆ ಇದೆ. ಇದೆಲ್ಲಕ್ಕೂ ಹೆಚ್ಚಾಗಿ ವ್ಯಾವಹಾರಿಕ ಬುದ್ಧಿ ಇದೆ.
          • ಜೋಸೆಫ್ ಜೋಬರ್ಟ್ ಈ ವಿಷಯದಲ್ಲಿ ಏನು ಹೇಳುತ್ತಾನೆ ಬಲ್ಲೆಯಾ? ಒಂದು ವೇಳೆ ಅವಳೇ ಗಂಡಾಗಿದ್ದರೆ ಯಾರು ಒಳ್ಳೆಯ ಗೆಳೆಯರಾಗಿರುತ್ತಿದ್ದರೋ, ಅಂತಹ ಹೆಣ್ಣನ್ನು ಮದುವೆಯಾಗು ಎಂದನ್ನುತ್ತಾನೆ.
          • ಕಣ್ತೆರೆದು ಮದುವೆಯಾಗು, ತದನಂತರ ಕಣ್ಮುಚ್ಚು - ಎಂಬುದು ಬಹು ಒಳ್ಳೆಯ ಜಾಣ್ಣುಡಿ.
          ಇಲ್ಲಿಗೆ ಬೀಚಿಯವರ  `ಕಮಲೆಯ ಓಲೆಗಳು' ಮುಗಿಯಿತು.
          ಇಂದಿಗಿಷ್ಟು. ಇನ್ನು ಶುಕ್ರವಾರ. ಬೀಚಿಯವರ ಇನ್ನೊಂದು ಪುಸ್ತಕ.
          ಈಗ ನನ್ನ ಒಂದು ಮುಕ್ತಕ.

          ಬೀchi ಉವಾಚ 
          ಬೆಂಗಳೂರಿನ ಸಿಟಿ ಬಸ್ಸುಗಳೆಂದರೆ
          ಕಷ್ಟಗಳಿದ್ದಂತೆ ಮಗನೆ.
          ತಿಳಿಸಿ ಬಾರವು ಅವು ಬಂದರೆ ಒಂದರ
          ಹಿಂದೊಂದು ಬರುವವು ಒಡನೆ!
                                                                             ***